ಶಾಸಕ ಸಂಗಮೇಶ್ವರ್‌ಗೆ ಬೃಹತ್ ಕೈಗಾರಿಕಾ ಸಚಿವ ಸ್ಥಾನ ನೀಡಿ

| Published : Jul 01 2024, 01:45 AM IST

ಶಾಸಕ ಸಂಗಮೇಶ್ವರ್‌ಗೆ ಬೃಹತ್ ಕೈಗಾರಿಕಾ ಸಚಿವ ಸ್ಥಾನ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

೪ನೇ ಬಾರಿಗೆ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರನ್ನಾಗಿ ನೇಮಕಗೊಳಿಸುವಂತೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಆಗ್ರಹಿಸಿದೆ

ಕನ್ನಡಪ್ರಭ ವಾರ್ತೆ ಭದ್ರಾವತಿ

ಈ ಹಿಂದೆ ಪ್ರಪಂಚದ ಭೂಪಟದಲ್ಲಿ ಕೈಗಾರಿಕಾ ನಗರವಾಗಿ ಗುರುತಿಸಿಕೊಂಡು ದೇಶ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡಿರುವ ಕ್ಷೇತ್ರದಲ್ಲಿ ಇದುವರೆಗೂ ಚುನಾಯಿತ ಶಾಸಕರಿಗೆ ಮಂತ್ರಿ ಸ್ಥಾನ ಲಭಿಸದಿರುವುದು ದುರಾದುಷ್ಟಕರ ಸಂಗತಿಯಾಗಿದ್ದು, ಈ ಹಿನ್ನೆಲೆ ಪ್ರಸ್ತುತ ೪ನೇ ಬಾರಿಗೆ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರನ್ನಾಗಿ ನೇಮಕಗೊಳಿಸುವಂತೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಕ್ಷೇತ್ರ ವಿಶ್ವದ ಭೂಪಟದಲ್ಲಿ ಕೈಗಾರಿಕಾ ನಗರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಕಾಲಾನಂತರದಲ್ಲಿ ಕ್ಷೇತ್ರದ ನಿರ್ಲಕ್ಷ್ಯತನದಿಂದಾಗಿ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿಯುವ ಮೂಲಕ ಆರ್ಥಿಕ ಸ್ಥಿತಿ ಕುಸಿದು ಜನರು ನೆಮ್ಮದಿ ಬದುಕಿಗಾಗಿ ಬೇರೆಡೆಗೆ ವಲಸೆ ಹೋಗುವಂತಾಗಿದೆ. ಇದೀಗ ಪುನಃ ಹಿಂದಿನ ವೈಭವ ಮರುಕಳುಹಿಸಬೇಕು. ಕ್ಷೇತ್ರದ ಚುನಾಯಿತ ಶಾಸಕರು ಪ್ರಸ್ತುತ ಸರ್ಕಾರದ ಆಡಳಿತ ಪಕ್ಷದವರಾಗಿದ್ದು, ಈ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ಸಮಿತಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಪರವಾಗಿಲ್ಲ. ಪ್ರಸ್ತುತ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಿಂದ ಸಚಿವ ಸ್ಥಾನದ ಅಗತ್ಯವಿದೆ.

ಕ್ಷೇತ್ರದ ಜನರ ಪರವಾಗಿ ೪ ಬಾರಿ ಶಾಸಕರಾಗಿರುವ ಬಿ.ಕೆ.ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬ ವಿಶ್ವಾಸ ಹೊಂದಿದ್ದು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಹಿರಂಗ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಚಿವ ಸ್ಥಾನ ನೀಡಿಲ್ಲ. ತಕ್ಷಣ ಸಚಿವ ಸ್ಥಾನನೀಡಬೇಕೆಂದು ಒತ್ತಾಯಿಸಿ ಹಾಗೂ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ೨ ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಅದರಂತೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧುಬಂಗಾರಪ್ಪರನ್ನು ಮುಂದುವರೆಸಿ ಒಟ್ಟು ಜಿಲ್ಲೆಗೆ ೨ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜು. ೮ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಬಿ.ಎಚ್ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಮುಖರಾದ ಧರ್ಮಲಿಂಗಯ್ಯ, ತಿಮ್ಮಯ್ಯ, ಸಂಗಮೇಶ್, ಅಜಿತ್, ಅಜ್ಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.