ರಾಮನ ವಿರುದ್ಧ ಯಾರೇ ಮಾತನಾಡಿದರೂ ಹೋರಾಟ ಶತಃಸಿದ್ಧ: ಶಾಸಕ ವೇದವ್ಯಾಸ್‌ ಕಾಮತ್‌

| Published : Feb 16 2024, 01:49 AM IST

ರಾಮನ ವಿರುದ್ಧ ಯಾರೇ ಮಾತನಾಡಿದರೂ ಹೋರಾಟ ಶತಃಸಿದ್ಧ: ಶಾಸಕ ವೇದವ್ಯಾಸ್‌ ಕಾಮತ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಶಾಲೆ ಬಿಟ್ಟ ತಕ್ಷಣ ಹೊರಗೆ ಬಂದು ಜೈ ಶ್ರೀರಾಮ್ ಕೂಗಿದ್ದಾರೆ. ಜೈ ಶ್ರೀರಾಮ್ ಎನ್ನುವುದರಲ್ಲಿ ಕೋಮು ಪ್ರಚೋದನೆ ಏನಿದೆ? ಎಂದು ಶಾಸಕ ವೇದವ್ಯಾಸ್ ಕಾಮತ್‌ ಸಮರ್ಥಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಮನ ವಿರುದ್ಧ ಯಾರೇ ಮಾತನಾಡಿದರೂ ಹೋರಾಟ ಶತಃಸಿದ್ಧ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಜೆರೋಸಾ ಶಾಲೆ ವಿರುದ್ಧ ಹಿಂದು ನಿಂದನೆ ಹೋರಾಟದಲ್ಲಿ ಎಫ್ಐಆರ್ ದಾಖಲಿಸಿದ ಬಗ್ಗೆ ಗುರುವಾರ ಶಾಸಕ ವೇದವ್ಯಾಸ್‌ ಕಾಮತ್‌ ಸುದ್ದಿಗಾರರಲ್ಲಿ ಕಿಡಿ ಕಾರಿದ್ದಾರೆ. ಈ ಕುರಿತು ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ ಅವರು, ಘಟನೆಯಾದ ಮೂರನೇ ದಿನಕ್ಕೆ ಹೆತ್ತವರು ಮತ್ತು ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಸ್ಥಳೀಯ ಶಾಸಕನಾಗಿ ನನ್ನನ್ನು ಕರೆದಾಗ ನಾನು ಹೋಗಿದ್ದೇನೆ. ಅದಕ್ಕೂ ಮುನ್ನ ಆಡಳಿತ ಮಂಡಳಿಯವರನ್ನು ಕರೆದರೂ ಅವರು ಬರಲಿಲ್ಲ. ನಾನು ಅಲ್ಲಿಗೆ ಹೋಗಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಮುಖ್ಯಸ್ಥರಿಗೆ ಒತ್ತಡ ಹಾಕಿ ಎಂದು ಘಂಟಾಘೋಷವಾಗಿ ಹೇಳಿದ್ದೇನೆ. ಶಾಲೆಯ ಹೊರಗೆ ಪ್ರತಿಭಟನೆ ಮಾಡಬಾರದು ಎಂದು ಕಾನೂನಿಲ್ಲ. ಪ್ರತಿಭಟಿಸಿದರು ಎಂದು ಕೇಸ್‌ ಮಾಡುವುದಾದರೆ, ಕಾಂಗ್ರೆಸ್‌ ನಿಲುವು ಏನು ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

ಪೋಷಕರ ದೂರಿಗೆ ಸ್ಪಂದನ ಇಲ್ಲ: ಪ್ರತಿಭಟಿಸುವುದು ಸಂವಿಧಾನದಲ್ಲಿ ನೀಡಿದ ಹಕ್ಕು. ಅಲ್ಲಿನ ಪೋಷಕರು ಠಾಣೆಗೆ ದೂರು ನೀಡಿದರೂ ಇದುವರೆಗೆ ಕೇಸು ದಾಖಲಿಸಿಲ್ಲ. ಟೀಚರ್ ಹಿಂದು ದೇವರ ವಿರುದ್ಧ ಮಾತನಾಡಿದರೂ ಕೇಸು ಮಾಡಿಲ್ಲ. ಡಿಡಿಪಿಐ ತನಿಖೆ ಮಾಡುವ ಅಧಿಕಾರಿಯಾಗಿದ್ದು, ಅವರನ್ನು ವರ್ಗಾವಣೆ ಮಾಡಿದ್ದಾರೆ. ಅವರು ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಅವರನ್ನೇ ವರ್ಗಾವಣೆಗೊಳಿಸಿದ್ದಾರೆ ಎಂದರು.

ಜೈಶ್ರೀರಾಮ್‌ ಹೇಳಿದರೆ ತಪ್ಪೇನು?: ಶಿಕ್ಷಕಿ ಹೇಳಿರುವ ಬಗ್ಗೆ ಮಕ್ಕಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದನ್ನು ಸತ್ಯಶೋಧನೆ ಮಾಡುತ್ತಿರುವ ಸ್ವಯಂಘೋಷಿತ ಕಾಂಗ್ರೆಸ್‌ ಸಮಿತಿಗೆ ಗೊತ್ತಿಲ್ಲವೇ? ಮಕ್ಕಳು ಶಾಲೆ ಬಿಟ್ಟ ತಕ್ಷಣ ಹೊರಗೆ ಬಂದು ಜೈ ಶ್ರೀರಾಮ್ ಕೂಗಿದ್ದಾರೆ. ಜೈ ಶ್ರೀರಾಮ್ ಎನ್ನುವುದರಲ್ಲಿ ಕೋಮು ಪ್ರಚೋದನೆ ಏನಿದೆ? ಎಂದು ಶಾಸಕ ವೇದವ್ಯಾಸ್ ಕಾಮತ್‌ ಸಮರ್ಥಿಸಿಕೊಂಡರು. ಹಿಜಾಬ್ ಘಟನೆ ಆದಾಗ ಮಕ್ಕಳನ್ನು ಹಿಡಿದುಕೊಂಡು ಮಾಡಿದ್ದು ಕೋಮು ಪ್ರಚೋದನೆ ಅಲ್ಲವೇ?, ಮಣಿಪುರ ಘಟನೆ ವಿರುದ್ಧ ಮಕ್ಕಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದ್ದು ಪ್ರಚೋದನೆ ಅಗುವದಿಲ್ಲವಾ?, ಶಾಸಕ ಡಾ. ಭರತ್ ಶೆಟ್ಟಿಯವರು ಜೆರೋಸಾ ಶಾಲೆ ಬಳಿ ಬಂದೇ ಇಲ್ಲ. ಅವರು ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು. ಶರಣ್ ಪಂಪ್‌ವೆಲ್‌ ಕೂಡ ಜೆರೋಸಾ ಶಾಲೆಗೆ ಬಂದಿಲ್ಲ. ಶಾಲೆಗೆ ಬರದೇ ಇದ್ದವರ ಮೇಲೆ ಪೂರ್ವಯೋಜಿತವಾಗಿ ಎಫ್ಐಆರ್ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಅಧಿಕಾರಿಗೆ ಒತ್ತಡ ಹಾಕಿ ಎಫ್ಐಆರ್ ಮಾಡಿಸಿದ್ದಾರೆ ಎಂದರು.