--ಫೋಟೋ 25 ಎಂವೈಎಸ್‌ 26---ಕನ್ನಡಪ್ರಭ ವಾರ್ತೆ ಮೈಸೂರುಚುನಾಯಿತ ಜನಪ್ರತಿನಿಧಿಗಳಲ್ಲದ ವ್ಯಕ್ತಿಗಳೊಂದಿಗೆ ವಾರ್ಡುಗಳಲ್ಲಿ ಸಂಚರಿಸಿ ಕಾಮಗಾರಿ ಶುರುಮಾಡಿಸಿದ್ದೇನೆಂದು ಹೇಳಿಕೊಂಡು ಓಡಾಡಿರುವ ಹೂಟಗಳ್ಳಿ ನಗರಸಭೆ ಆಯುಕ್ತರು ಸೇರಿದಂತೆ ಮತ್ತಿತರ ಅಧಿಕಾರಿಗಳು ಶಾಸಕರಿಗೆ ಅಗೌರವ ತಂದಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದರು. ಹೂಟಗಳ್ಳಿ ನಗರಸಭಾ ವ್ಯಾಪ್ತಿಯಲ್ಲಿ ತಮ್ಮ ಘನತೆ, ಶಾಸಕ ಸ್ಥಾನಕ್ಕೆ ಅಗೌರವ ತೋರುವಂತೆ ವರ್ತಿಸಿರುವ ಅಧಿಕಾರಿಗಳನ್ನು ಸದನಕ್ಕೆ ಕರೆಸಿ ಶಿಸ್ತುಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೂಟಗಳ್ಳಿ ನಗರಸಭೆಯಲ್ಲಿ , ಜಿಲ್ಲಾಧಿಕಾರಿಗಳು ಅದರ ಅಧ್ಯಕ್ಷರಾಗಿದ್ದು, ನಗರಸಭೆ ಅನುದಾನದಡಿ ಕಾಮಗಾರಿಗೆ ಟೆಂಡರ್ ಕರೆದು , ಈಗಾಗಲೇ ಕಾರ್ಯದೇಶ ನೀಡಿದ್ದು, ಕಾಮಗಾರಿ ಪ್ರಾರಂಭಿಸಬೇಕಾಗಿತ್ತು, ಆದರೆ ವಿಧಾನಸಭೆ ಅಧಿವೇಶನ ಭಾಗವಹಿಸಬೇಕಾಗಿದ್ದ ಕಾರಣ ಸ್ವಲ್ಪ ತಡವಾಯಿತು, ನಾನು ಅಧಿವೇಶನದಲ್ಲಿ ಭಾಗವಹಿರುವ ಸಮಯ ನೋಡಿಕೊಂಡು ಮಾ. 23- 24 ರಂದು ಆಯುಕ್ತ ಬಿ.ಎನ್.ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಧು, ಕಿರಿಯ ಎಂಜಿನಿಯರ್‌ ಹರ್ಷ, ಇಂಜಿನಿಯರ್ ದಿಲೀಪ್ ಅವರು ಹಿನಕಲ್‌ನ ಬೀದಿ ಬೀದಿಗಳಲ್ಲಿ ಜನಪ್ರತಿನಿಧಿಗಳಲ್ಲದ ವ್ಯಕ್ತಿಗಳೊಂದಿಗೆ ಸಂಚಾರ ಮಾಡಿ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಮಾತು ಮತ್ತು ವೀಕ್ಷಣೆಯ ವೀಡಿಯೋಗಳನ್ನು ಸಂಗ್ರಹಿಸಲಾಗಿದೆ. ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಜನಪ್ರತಿನಿಧಿ ಅಲ್ಲದ ವ್ಯಕ್ತಿಗಳ ಜೊತೆಗೆ ತೆರಳಿ ಕಾಮಗಾರಿಗಳ ವಿಕ್ಷಣೆ ಮಾಡಿರುವುದು ಶಾಸಕರ ಹಕ್ಕು ಮತ್ತು ಘನತೆಗೆ ಅಗೌರವವಾಗಿದೆ. ಅಧಿಕಾರಿಗಳು ಈ ರೀತಿಯಲ್ಲಿ ವರ್ತಿಸಿ ಶಾಸಕರ ಘನತೆಗೆ ಧಕ್ಕೆ ತಂದಿರುವ ಕಾರಣ ಅಧಿಕಾರಿಗಳ ವಿರುದ್ದ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ. ಶಾಸಕರ ಘನತೆಗೆ ತಂದಿರುವ ಅಧಿಕಾರಿಗಳನ್ನು ಕರೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.ಶಾಸಕರ ಗಮನಕ್ಕೂ ತಾರದೆ ಅಧಿಕಾರಿಗಳು ಜನರ ಮುಂದೆ ಹೇಳುವಂತಾಗಿರುವ ಕಾರಣ ಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ, ಕೂಡಲೇ ಅವರನ್ನು ಸದನಕ್ಕೆ ಕರೆಯಿಸಬೇಕು, 224 ಜನ ಶಾಸಕರಿದ್ದು, ಶಾಸಕರೇ ಇಲ್ಲದೆ ಈ ರೀತಿ ಮಾಡಿದರೇ ಹೇಗೆ, ಆದ್ದರಿಂದ ಅಧ್ಯಕ್ಷರಾದ ನೀವು ನಮ್ಮೆಲ್ಲರ ರಕ್ಷಣೆಗೆ ಧಾವಿಸಬೇಕು, ಅವರ ವಿರುದ್ದ ಕ್ರಮಕ್ಕೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು. ವಿರೋಧಪಕ್ಷದ ನಾಯಕರಾದ ಅಶೋಕ್ ಮಾತನಾಡಿ ಜಿ.ಟಿ ದೇವೇಗೌಡರು ಈ ವಿಚಾರವಾಗಿ ಬೆಳಿಗ್ಗೆ ಚರ್ಚಿಸಿದರು, ಯಾವ ಪಕ್ಷದ ಶಾಸಕರಾದರೂ ಸರಿ, ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ, ಅಧಿಕಾರಗಳ ವಿರುದ್ದ ಕ್ರಮವಾಗಬೇಕು ಎಂದು ಆಗ್ರಹಿಸಿದರು..ವಿಧಾನಸಭೆ ವಿರೋಧಪಕ್ಷದ ಮುಖ್ಯಸಚೇತಕ ವಿ.ಸುನಿಲ್ ಕುಮಾರ್ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಧಿಕಾರಿಗಳು ಶಾಸಕರಿಗೆ ಅಗೌರವ ತೋರಿದ್ದು, ಯಾವುದೇ ಕ್ಷೇತ್ರದಲ್ಲಿ ಶಾಸಕರ ಘನತೆಗೆ ಧಕ್ಕೆ ತರುವ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು, ಇದು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷದ ಶಾಸಕರಿಗೂ ಅಗೌರವ ತರುವ ಕೆಲಸಗಳು ನಡೆಯುತ್ತಿವೆ. ಶಾಸಕರ ಗೌರವಕ್ಕೆ ಧಕ್ಕೆ ತರುವ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮಜರುಗಿಸಬೇಕು. ಅಧಿಕಾರಿಗಳು ರಾಜಕಾರಣ ಮಾಡುವುದಾರೇ ಶಾಸಕರು ಯಾಕೆ ಇರಬೇಕು. ಅಧಿಕಾರಿಗಳನ್ನು ತಲೆಮೇಲೆ ಕೂರಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಚಾಟಿ ಬೀಸಿದರು. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಶಾಸಕರಿಗೆ ಅಗೌರವ ತೋರುವಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಜರುಗಿಸಬೇಕು. ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಕಾಮಗಾರಿ ಪರಿಶೀಲನೆ ಮಾಡುವುದಾರೇ ಶಾಸಕರ ಬೆಲೆ ಎಲ್ಲಿಗೆ ಹೋಗಬೇಕು.ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಕಾನೂನು ಮೀರಿ ಹೋಗಿರುವ ಅಧಿಕಾರಿಗಳನ್ನು ಅಮಾನತುಪಡಿಸುವುದು ಅಥವಾ ಶಿಸ್ತು ಕ್ರಮಜರುಗಿಸುವ ಕೆಲಸವನ್ನು ಮಾಡಲೇಬೇಕು ಎಂದು ಒತ್ತಾಯಿಸಿದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಶಾಸಕರು ಆಡಳಿತ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಶಾಸಕರಿಗೆ ಅಗೌರವ ತೋರುವ ಅಧಿಕಾರಿಗಳ ವಿರುದ್ದ ಕ್ರಮಜರುಗಿಸಬೇಕು. ಶಾಸಕರಿಗೆ ಅಗೌರವ ತೋರುವುದು,ಘನತೆಗೆ ಧಕ್ಕೆ ತರುವಂತಹ ಕೆಲಸಮಾಡಿದ ಅಧಿಕಾರಿಗಳನ್ನು ಸಹಿಸಬಾರದು. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು, ಇದರ ಬಗ್ಗೆ ಸೂಕ್ತ ಆದೇಶವಾಗ ಬೇಕು ಎಂದು ಸರ್ಕಾರಕ್ಕೆ ತಿಳಿಸಿದರು..