ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನಿಕತೆ ಮತ್ತು ಹಣದ ವ್ಯಾಮೋಹಕ್ಕೊಳಗಾಗಿ ಆರೋಗ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ವಿಷಾದಿಸಿದರು.ಸ್ನೇಹ ಚಾರಿಟಬಲ್ ಟ್ರಸ್ಟ್, ಡಿ.ಎಂ.ಆರ್.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ತಾಲೂಕಿನ ಕಾರಸವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ಆರೋಗ್ಯದಿಂದ ಎಲ್ಲವನ್ನೂ ಪಡೆಯಬಹುದು. ಇಂದಿನ ಆಧುನಿಕತೆಯಲ್ಲಿ ಆಹಾರ ಪದ್ಧತಿ, ಜೀವನ ಶೈಲಿ ಇವೆಲ್ಲವೂ ಬದಲಾದಂತೆ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದ ಹಿಂದೆ ಹಿರಿಯ ಜೀವ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಸೂಕ್ತ ಎಂದರು.ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಮಾತನಾಡಿ, ದುಡಿಯುವ ವರ್ಗ ಇಂದು ಗ್ರಾಮಾಂತರ ಪ್ರದೇಶದಲ್ಲಿಯೇ ಇದೆ. ಒಂದು ವೇಳೆ ಈ ವರ್ಗದ ಆರೋಗ್ಯ ಕೆಟ್ಟರೆ ದೇಶದ ವ್ಯವಸ್ಥೆಯೇ ಕೆಟ್ಟಂತಾಗುತ್ತದೆ. ದುಡಿಯುವ ವರ್ಗದ ಆರೋಗ್ಯವನ್ನು ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದರು.
ಇದೇ ವೇಳೆ ಸುತ್ತಮುತ್ತಲ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ನೇಹ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಸುಧೀರ್ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್.ರಾಜೇಶ್, ಬೆಲ್ಲ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಕಾರಸವಾಡಿ ಮಹದೇವು, ಗ್ರಾಪಂ ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಸದಸ್ಯ ರವೀಶ್, ಟ್ರಸ್ಟ್ ಸದಸ್ಯರಾದ ಮುಜರ್ ಆಲಿಖಾನ್, ಎಂ. ಮಹೇಶ್, ಪಿ.ಬಿ.ವಿನುತ, ಭಾಗ್ಯಮ್ಮ, ಸೌಮ್ಯ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.ಅ.8 ರಿಂದ 25 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ
ಮಂಡ್ಯ:ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅ.8 ರಿಂದ 25 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.ಅ.8ರಂದು ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಅ. 9 ರಂದು ಕೀಲಾರ ಸರ್ಕಾರಿ ಆರೋಗ್ಯ ಕೇಂದ್ರ, ಅ.15 ರಂದು ಬೆಳಗ್ಗೆ 10 ಗಂಟೆಗೆ ಬಿಂಡಿಗನವಿಲೆ ಸರ್ಕಾರಿ ಆರೋಗ್ಯ ಕೇಂದ್ರ ಹಾಗೂ ಮಧ್ಯಾಹ್ನ 1 ಗಂಟೆಗೆ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ, ಅ16 ರಂದು ಕೆ.ಆರ್.ಪೇಟೆ ಆಸ್ಪತ್ರೆ, ಅ.18 ರಂದು ಬಸರಾಳು ಪ್ರಾಥಮಿಕ ಆರೋಗ್ಯ ಕೇಂದ್ರ, ಅ.19 ರಂದು ಕೆ. ಎಂ ದೊಡ್ಡಿ ಸರ್ಕಾರಿ ಆರೋಗ್ಯ ಕೇಂದ್ರ, ಅ.21 ರಂದು ಚಿನಕುರಳಿ ಸರ್ಕಾರಿ ಆರೋಗ್ಯ ಕೇಂದ್ರ, ಅ.22 ರಂದು ಅರಕೆರೆ ಸರ್ಕಾರಿ ಆರೋಗ್ಯ ಕೇಂದ್ರ, ಅ.23 ರಂದು ಶಿವಳ್ಳಿ ಸರ್ಕಾರಿ ಆರೋಗ್ಯ ಕೇಂದ್ರ, ಅ.24 ರಂದು ಮದ್ದೂರು ಆಸ್ಪತ್ರೆ, ಅ.25 ರಂದು ಪಾಂಡವಪುರ ಉಪ ವಿಭಾಗ ಸರ್ಕಾರಿ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.