ಕನ್ನಡಪ್ರಭ ವಾರ್ತೆ ಮಂಡ್ಯಮರ್ಯಾದ ಪುರುಷೋತ್ತಮ ಶ್ರೀರಾಮ ನಮ್ಮ ಆದರ್ಶ. ಮೋದಿ ಅವರು ಸಂಯಮದ ಪ್ರತೀಕ. ಧರ್ಮರಕ್ಷಕ, ಆತ್ಮನಿಗ್ರಹ, ಸೇವಾಭಾವ ಗುಣವನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ಕಳೆದ 30 ವರ್ಷದ ರಾಜಕೀಯ ಜೀವನದಲ್ಲಿ ಮರ್ಯಾದೆ ಬಿಟ್ಟು ರಾಜಕಾರಣ ಮಾಡಿಲ್ಲ ಎಂದು ರಾಜ್‌ಕೋಟ್‌ನ ಆರ್ಷಾ ವಿದ್ಯಾಮಂದಿರದ ಶ್ರೀ ಪರಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ನಡೆದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂಬ ಧ್ಯೇಯವನ್ನಿಟ್ಟುಕೊಂಡು ದೇಶವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು, ಎಲ್ಲರ ಏಳಿಗೆಯನ್ನು ಮೂಲಮಂತ್ರವಾಗಿಸಿಕೊಂಡಿದ್ದಾರೆ. ಸ್ವಚ್ಛ ಭಾರತ್ ಮೂಲಕ ನೈರ್ಮಲ್ಯದಲ್ಲಿ ಕ್ರಾಂತಿ ಮಾಡಿದ್ದಾರೆ. ಆತ್ಮನಿರ್ಭರ್, ಡಿಜಿಟಲ್ ಇಂಡಿಯಾ ಎಲ್ಲರನ್ನೂ ತಲುಪಿದ್ದು, ಅದಕ್ಕೆ ಮೋದಿ ವಿಶ್ವನಾಯಕ ಎನಿಸಿದ್ದಾರೆ ಎಂದು ಬಣ್ಣಿಸಿದರು.