ಮೋದಿ ಪ್ರಮಾಣವಚನ: ಬಿಜೆಪಿ ವಿಜಯೋತ್ಸವ

| Published : Jun 10 2024, 12:45 AM IST

ಸಾರಾಂಶ

ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಸಂಜೆ ಭಾನುವಾರ ವಿಜಯೋತ್ಸವ ಆಚರಿಸಲಾಯಿತು. ಮಡಿಕೇರಿ ಒಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಭಾನುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.

ಮಾಜಿ ಸ್ಪೀಕರ್ ಕೆ‌.ಜಿ. ಬೋಪಯ್ಯ ಸಮ್ಮುಖದಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯ ಬಳಿಕ ನಗರದ ಚೌಕಿ ವೃತ್ತದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲಾಯಿತು. ಪಟಾಕಿ ಸಿಡಿಸಿ ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮೋದಿ ಮತ್ತೆ ಪ್ರಧಾನಿಯಾಗಿರೋದು ಎಲ್ಲರಿಗೂ ಸಂತಸ ತಂದಿದೆ. ಎನ್.ಡಿ.ಎ. ಮೈತ್ರಿಕೂಟ 5 ವರ್ಷ ಆಡಳಿತ ನಡೆಸಲಿದೆ.10 ವರ್ಷ ನೋಡಿರೋದು ಮೋದಿಯ ಟ್ರಯಲ್ ಆಡಳಿತ. ಇನ್ನು ಮುಂದೆ ಅಭಿವೃದ್ಧಿ ಹಾಗೂ ದೇಶದ ಸಮಸ್ಯೆಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಕೊಡಗಿನಲ್ಲಿ ಈ ಭಾರಿ ವಿಧಾನ ಸಭಾ ಚುನಾವಣೆಯಲ್ಲಿ ಸೋಲಾಗಿದೆ. ಲೋಕಸಭಾ, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕೊಡಗು ಬಿಜೆಪಿಯ ಭದ್ರಕೋಟೆ ಎಂಬುದನ್ನ ತೋರಿಸಿಕೊಟ್ಟಿದೆ‌ ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.