ಸಾರಾಂಶ
ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಹೊರವಲಯದಲ್ಲಿರುವ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ. ಜೂ.24 ರಂದು ಆಶ್ರಮಕ್ಕೆ ಆಗಮಿಸಿರುವ ಅವರು ಯಾರ ಭೇಟಿಗೂ ಅವಕಾಶ ಕೊಡದೆ ವಿಶ್ರಾಂತಿ ಹಾಗೂ ಧ್ಯಾನದಲ್ಲಿ ಮಗ್ನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಹೊರವಲಯದಲ್ಲಿರುವ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ. ಜೂ.24 ರಂದು ಆಶ್ರಮಕ್ಕೆ ಆಗಮಿಸಿರುವ ಅವರು ಯಾರ ಭೇಟಿಗೂ ಅವಕಾಶ ಕೊಡದೆ ವಿಶ್ರಾಂತಿ ಹಾಗೂ ಧ್ಯಾನದಲ್ಲಿ ಮಗ್ನರಾಗಿದ್ದಾರೆ.ಮೋಹನ್ ಭಾಗವತ್ ಅವರು ಪ್ರತಿವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ನಿಂಬಾಳದ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ಬಂದು ಮೂರ್ನಾಲ್ಕು ದಿನಗಳ ಕಾಲ ತಂಗುತ್ತಾರೆ. ಹಲವಾರು ವರ್ಷಗಳಿಂದ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ತಪ್ಪದೇ ಬರುವ ಅವರು ಸಂಘ, ಸಂಘಟನೆ, ರಾಜಕೀಯ ವಿಚಾರಗಳಿಂದ ದೂರವಿದ್ದು ಕೇವಲ ಧ್ಯಾನದಲ್ಲೇ ಮಗ್ನರಾಗಿರುತ್ತಾರೆ.
ಝಡ್ ಪ್ಲಸ್ ಭದ್ರತೆಯಲ್ಲಿ ಆಶ್ರಮದ ಕೆಲವೇ ಜನರ ಜೊತೆಗಿರುವ ಮೋಹನ್ ಭಾಗವತ್ ಅವರ ಭೇಟಿಗೆ ಯಾರಿಗೂ ಅವಕಾಶವಿಲ್ಲ. ರಾನಡೆ ಆಶ್ರಮದ ಹೊರಗಡೆ ಜಿಲ್ಲಾ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಗುರುವಾರ ಬೆಳಗ್ಗೆ ರಾನಡೆ ಆಶ್ರಮದಿಂದ ಹೊರಟು ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ದೇವರನಿಂಬರಗಿ ಗ್ರಾಮದ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಹಾರಾಷ್ಟ್ರದ ಉಮದಿಗೆ ತೆರಳುತ್ತಾರೆ ಎಂದು ಆಶ್ರಮದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.