ಸಾರಾಂಶ
ಬೀದರ್ ಚಾಮರಾಜನಗರ ಎನ್ಎಚ್ ಬಳಿ ನಿರ್ಮಾಣ । ಕಾರ್ಯಾರಂಭವಿಲ್ಲದೆ ಶಿಥಿಲಾವಸ್ಥೆಗೆ ಕಟ್ಟಡ
ಬಿಜಿಕೆರೆ ಬಸವರಾಜ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರುಬರದ ನಾಡನ್ನು ಸೀಳಿಕೊಂಡು ಸಾಗಿರುವ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಬದಿಯ ಬಸವೇಶ್ವರ ನಗರದ ಬಳಿಯಲ್ಲಿ ಸದಾ ವಾಹನಗಳಿಂದ ಕಿಕ್ಕಿರಿದು ತುಂಬಿ ಉದ್ಯೋಗ ಸೃಷ್ಟಿಯಾಗಬೇಕಿದ್ದ ವಿಶ್ರಾಂತಿ ತಂಗುದಾಣ (ರೆಸ್ಟ್ ಏರಿಯಾ) ನಿರ್ಮಾಣವಾಗಿ ವರ್ಷಗಳೇ ಕಳೆದರೂ ಕಾರ್ಯಾರಂಭವಿಲ್ಲದೆ ಅಲ್ಲಿನ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಅಭಿವೃದ್ಧಿಗೆ ಎಂದೂ ಬಾಗಿಲು ತೆರೆದುಕೊಳ್ಳದ ಬಯಲು ಸೀಮೆಯ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ತಾಲೂಕನ್ನು ಬಳಸಿಕೊಂಡು ಹಾದು ಹೋಗಿರುವ ಬೀದರ್ ಚಾಮರಾಜನಗರ 150ಎ ರಾಷ್ಟ್ರೀಯ ಹೆದ್ದಾರಿ ಹಲವು ಹಳ್ಳಿಗಳನ್ನು ಸೀಳಿಕೊಂಡು ಸಾಗಿದ್ದು ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿವೆ. ರಾಜ್ಯ ಸೇರಿದಂತೆ ಹೊರ ರಾಜ್ಯದ ಪ್ರಮುಖ ವಾಣಿಜ್ಯ ನಗರಗಳ ಗಡಿಗಳನ್ನು ಸಂಪರ್ಕಿಸುತ್ತಿರುವ ಹೆದ್ದಾರಿಗೆ ಅಂಟಿಕೊಂಡಂತೆ 10 ಎಕರೆ ಪ್ರದೇಶದಲ್ಲಿ ವಿಶ್ರಾಂತಿ ಪ್ರದೇಶ ನಿರ್ಮಾಣವಾಗಿದೆ. ಆದರೆ ಇದು ಇನ್ನೂ ಸಾರ್ವಜನಿಕ ಸೇವೆಗೆ ಬಳಕೆ ಇಲ್ಲವಾಗಿದೆ.ವಿಶ್ರಾಂತಿ ತಂಗುದಾಣದಲ್ಲಿ ಹತ್ತಾರು ಸೌಲಬ್ಯಗಳು ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಸ್ಯಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಹೋಟೆಲ್ ಕಟ್ಟಡಗಳು ಇವೆ. ಕಟ್ಟಡದ ಆವರಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನೂರಾರು ಕಿ.ಮೀ. ಪ್ರಯಾಣ ಮಾಡುವ ಚಾಲಕ ಮತ್ತು ಸಾರ್ವಜನಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ನೂರಾರು ಬಸ್ಸು. ಲಾರಿ. ಕಾರು ಸೇರಿದಂತೆ ವಿವಿಧ ವಾಹನಗಳನ್ನು ಪಾರ್ಕಿಂಗ್ ಮಾಡಲು ವಿಶಾಲವಾದ ಆವರಣ ಇದ್ದರೂ ಒಮ್ಮೆಯೂ ವಾಹನಗಳು ಇತ್ತ ಸುಳಿದಿಲ್ಲ.
ನೂರಾರು ಜನರ ಬದುಕಿಗೆ ಉದ್ಯೋಗ ಕಲ್ಪಿಸಬಹುದಾಗಿದ್ದ ವಿಶ್ರಾಂತಿ ತಂಗುದಾಣದಲ್ಲಿನ ರೆಸ್ಟೋರೆಂಟ್, ಡಾಬಾ, ವಿಶ್ರಾಂತಿ ಸಾರ್ವಜನಿಕ ಸೇವೆಗೆ ಬಳಕೆಯಾಗದ ಪರಿಣಾಮವಾಗಿ ಕಟ್ಟಡಗಳು ಧೂಳು ಹಿಡಿದಿದ್ದು ಉದ್ಘಾಟನೆಗೂ ಮುನ್ನ ಕಿಟಕಿ ಗಾಜುಗಳು ಹಾಳಾಗಿವೆ. ಆವರಣ ರೈತರ ಕೃಷಿ ಉತ್ಪನ್ನಗಳ ಹಸನಾಗಿಸುವಂತ ಒಕ್ಕಲು ತಾಣವಾಗಿ ಮಾರ್ಪಾಡಾಗಿದೆ. ಹೀಗಿದ್ದರೂ ಸಂಬಂದಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.ಹೆದ್ದಾರಿ ಪ್ರಾಧಿಕಾರವು ಕೋಟ್ಯಂತರ ಹಣ ಖರ್ಚು ಮಾಡಿ ಕಟ್ಟಿದ ವಿಶ್ರಾಂತಿ ತಂಗುದಾಣದಲ್ಲಿನ ಕಟ್ಟಡಗಳು ಉದ್ದೇಶಿತ ಯೋಜನೆಗೆ ಬಳಕೆಯಾಗದೆ ನಾಲ್ಕೈದು ವರ್ಷಗಳಿಂದ ಉದ್ಘಾಟನೆ ಬಾಗ್ಯ ಕಾಣದೆ ಕಟ್ಟಡವೂ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪುವತ್ತ ಸಾಗಿದೆ.
ಅಲ್ಲದೆ ಆವರಣ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಇನ್ನಾದರೂ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗಾಗಿ ಕೋಟ್ಯಂತರ ರು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ವಿಶ್ರಾಂತಿ ತಂಗುದಾಣವನ್ನು ಉದ್ಘಾಟನೆ ಮಾಡಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವತ್ತ ಗಮನ ಹರಿಸಬೇಕಿದೆ.ಹೆದ್ದಾರಿ ಬಳಿಯಲ್ಲಿ ನಿರ್ಮಿಸಿರುವ ವಿಶ್ರಾಂತಿ ತಂಗುದಾಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ. ಸಂಬಂಧಿಸಿದ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸುತ್ತೇನೆ.
ಬಿ.ಟಿ.ಕುಮಾರ ಸ್ವಾಮಿ, ಅಪರ ಜಿಲ್ಲಾಧಿಕಾರಿ. ಚಿತ್ರದುರ್ಗ.150ಎ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಸವೇಶ್ವರ ನಗರ ಬದಿಯಲ್ಲಿ ನಿರ್ಮಿಸಿರುವ ವಿಶ್ರಾಂತಿ ತಂಗುದಾಣ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಪರಿಣಾಮವಾಗಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಆಗಬೇಕಾಗಿದ್ದ ಸ್ಥಳ ಈಗ ಉಪಯೋಗವಾಗವಿಲ್ಲದಾಗಿದೆ. ಸಂಬಂದಿಸಿದ ಅಧಿಕಾರಿಗಳು ಆದಷ್ಟು ಶೀಘ್ರಗಿದನ್ನು ಸಾರ್ವಜನಿಕ ಸೇವೆಗೆ ನೀಡಬೇಕು.
ಮರ್ಲಹಳ್ಳಿ ರವಿ ಕುಮಾರ್ ರಾಜ್ಯ ರೈತ ಸಂಘ, ಜಿಲ್ಲಾ ಪ್ರದಾನ ಕಾರ್ಯದರ್ಶಿ.