ಕೇಜಿ ಗಟ್ಟಲೇ ಚಿನ್ನದ ಆಮಿಷವೊಡ್ಡಿ ವಂಚನೆ! ಬ್ಯಾಂಕ್‌ ಅಧಿಕಾರಿ ಸೇರಿ ಏಳು ಮಂದಿ ಆರೋಪಿಗಳು ಅರೆಸ್ಟ್

| Published : Aug 10 2024, 01:40 AM IST / Updated: Aug 10 2024, 07:07 AM IST

ಕೇಜಿ ಗಟ್ಟಲೇ ಚಿನ್ನದ ಆಮಿಷವೊಡ್ಡಿ ವಂಚನೆ! ಬ್ಯಾಂಕ್‌ ಅಧಿಕಾರಿ ಸೇರಿ ಏಳು ಮಂದಿ ಆರೋಪಿಗಳು ಅರೆಸ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್ಯಂತರ ರುಪಾಯಿ ಪಡೆದು ವಂಚಿಸಿದ ಆರೋಪದಡಿ ನಿವೃತ್ತ ಬ್ಯಾಂಕ್‌ ಅಧಿಕಾರಿ ಸೇರಿ ಏಳು ಮಂದಿ ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಜಾರಿ ನಿರ್ದೇಶನಾಲಯ(ಇ.ಡಿ.) ಜಪ್ತಿ ಮಾಡಿರುವ ಭಾರೀ ಪ್ರಮಾಣದ ಕಪ್ಪು ಹಣ ಗೋದಾಮಿನಲ್ಲಿ ಕೊಳೆಯದಂತೆ ಔಷಧಿ ಸಿಂಪಡಿಸಬೇಕು. ಔಷಧಿ ಖರೀದಿಗೆ ಹಣ ಕೊಟ್ಟರೆ ಕೆ.ಜಿ.ಗಟ್ಟಲೇ ಚಿನ್ನ ಮತ್ತು ಹತ್ತು ಪಟ್ಟು ಹೆಚ್ಚುವರಿ ಹಣ ನೀಡುವುದಾಗಿ ಅಮಾಯಕರನ್ನು ನಂಬಿಸಿ ಕೋಟ್ಯಂತರ ರುಪಾಯಿ ಪಡೆದು ವಂಚಿಸಿದ ಆರೋಪದಡಿ ನಿವೃತ್ತ ಬ್ಯಾಂಕ್‌ ಅಧಿಕಾರಿ ಸೇರಿ ಏಳು ಮಂದಿ ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಸಂತವಲ್ಲಭನಗರ ನಿವಾಸಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ನಾಗೇಶ್ವರ ರಾವ್, ಈತನ ಪತ್ನಿ ಸುಜರಿತಾ, ಮಗಳು ತರುಣಾ, ಅಳಿಯ ಗೌತಮ್‌, ಸ್ನೇಹಿತರಾದ ಹೊಸಕೆರೆಹಳ್ಳಿಯ ಕಲ್ಪನಾ, ಆಕೆಯ ಮಗ ದಿಲೀಪ್‌, ಚಾಲಕ ಮಂಜು ಬಂಧಿತರು. ಆರೋಪಿಗಳಿಂದ ₹5 ಲಕ್ಷ ನಗದು, 500 ಗ್ರಾಂ ಬೆಳ್ಳಿ ಹಾಗೂ 50 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

₹25 ಕೋಟಿ ವಂಚನೆ?:

ಬಂಧಿತ ಏಳು ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಆರೋಪಿ ಕಲ್ಪನಾಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ. ಈ ಗ್ಯಾಂಗ್‌ ವಿರುದ್ಧ ನಾಲ್ಕು ವಂಚನೆ ದೂರುಗಳು ಬಂದಿದ್ದು, ಸುಮಾರು ₹25 ಕೋಟಿ ವಂಚನೆ ಮಾಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌:

ಆರೋಪಿ ನಾಗೇಶ್ವರ ರಾವ್‌ ಎಸ್‌ಬಿಐ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಬಳಿಕ ನಾಗೇಶ್ವರ ರಾವ್‌, ಈತನ ಪತ್ನಿ ಸುಜರಿತಾ, ಮಗಳು ವರುಣಾ, ಅಳಿಯ ಗೌತಮ್‌ ಹಾಗೂ ಇತರೆ ಆರೋಪಿಗಳು ಗ್ಯಾಂಗ್‌ ಕಟ್ಟಿಕೊಂಡು ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದರು.

ಹಣವಂತರನ್ನು ಟಾರ್ಗೆಟ್‌ ಮಾಡಿ ಗಾಳ:

ಕೋವಿಡ್‌ ಸಮಯದಲ್ಲಿ ಮನೋರಾಯನಪಾಳ್ಯದ ಶಾಂತಿ ಎಂಬಾಕೆಗೆ ಕಲ್ಪನಾ ಪರಿಚಿತವಾಗಿದ್ದಳು. ಶಾಂತಿ ಅವರ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ಕಲ್ಪನಾ, ತನ್ನ ಗ್ಯಾಂಗ್‌ಗೆ ಶಾಂತಿ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಶಾಂತಿ ಅವರಿಂದ ಹಣ ಪಡೆದು ವಂಚಿಸಲು ಗ್ಯಾಂಗ್‌ ಸಂಚು ರೂಪಿಸಿತ್ತು. ಆರಂಭದಲ್ಲಿ ಕಲ್ಪನಾ, ನಮಗೆ ತಮಿಳುನಾಡಿನ ಕುಡುಮುಡಿಯಲ್ಲಿ ₹100 ಕೋಟಿ ಮೌಲ್ಯದ ಆಸ್ತಿ ಇದ್ದು, ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ₹15 ಲಕ್ಷ ಅಗತ್ಯವಿದೆ. ಹಣ ಕೊಟ್ಟರೆ ಶೇಕಡ 3ರಷ್ಟು ಬಡ್ಡಿ ಸೇರಿಸಿ 15 ದಿನದೊಳಗೆ ಹಣ ವಾಪಾಸ್ ನೀಡುತ್ತೇನೆ ಎಂದು ಹೇಳಿದ್ದಾಳೆ. ಈ ಮಾತು ನಂಬಿದ ಶಾಂತಿ, ನಾಗೇಶ್ವರ ರಾವ್‌ ದಂಪತಿ ಸಮ್ಮುಖದಲ್ಲಿ ಕಲ್ಪನಾಗೆ ₹15 ಲಕ್ಷ ನೀಡಿದ್ದಾರೆ.

ಕೆ.ಜಿ.ಗಟ್ಟಲೇ ಚಿನ್ನ, ಬೆಳ್ಳಿಯ ಆಮೀಷ

15 ದಿನಗಳ ಬಳಿಕ ಶಾಂತಿ ಅವರು ಹಣ ವಾಪಾಸ್ ಕೇಳಿದಾಗ, ಆರೋಪಿಗಳು ಹೊಸ ಕಥೆ ಕಟ್ಟಿದ್ದಾರೆ. ₹100 ಕೋಟಿ ಕಪ್ಪು ಹಣವನ್ನು ಕಾನೂನುಬದ್ಧವಾಗಿ ಪರಿವರ್ತಿಸಲು ₹30 ಕೋಟಿ ಕಟ್ಟಬೇಕು. ನೀವು ನಮಗೆ ಕೊಟ್ಟಿರುವ ಹಣಕ್ಕೆ ಅದರ ಹತ್ತು ಪಟ್ಟು ಹಣವನ್ನು ಹೆಚ್ಚುವರಿಯಾಗಿ ಕೊಡುತ್ತೇವೆ. ಅಂತೆಯೇ 2 ಕೆ.ಜಿ. ಚಿನ್ನ ಹಾಗೂ 20 ಕೆ.ಜಿ. ಬೆಳ್ಳಿ ವಿಗ್ರಹಗಳನ್ನು ನೀಡುತ್ತೇವೆ. ಈ ಕಪ್ಪು ಹಣದ ವ್ಯವಹಾರದಲ್ಲಿ ಆರ್‌ಬಿಐನ ಉನ್ನತಾಧಿಕಾರಿಗಳು ನಮ್ಮ ಜತೆಗೆ ಇದ್ದಾರೆ ಎಂದು ಹೇಳಿದ್ದಾರೆ.

ಶಾಂತಿಯಿಂದ ₹4 ಕೋಟಿ ಪಡೆದು ಮೋಸ

ಮುಂದುವರೆದು, ಆರೋಪಿ ವರುಣಾ ನಾನು ಇ.ಡಿ. ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾಳೆ. ಗೋದಾಮಿನಲ್ಲಿರುವ ಹಣದ ಕಂತೆಗಳಿಗೆ ಔಷಧಿ ಸಿಂಪಡಿಸಬೇಕು. ಇಲ್ಲವಾದರೆ, ನೋಟುಗಳು ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತವೆ. ಈಗಲೇ ನಮಗೆ ಹಣ ಕೊಟ್ಟರೆ ಮೂರು ದಿನದಲ್ಲಿ ಹತ್ತು ಪಟ್ಟು ಹೆಚ್ಚುವರಿ ಹಣ ನೀಡುತ್ತೇವೆ ಎಂದು ಶಾಂತಿ ಅವರಿಗೆ ಆಮಿಷವೊಡ್ಡಿದ್ದಾರೆ.

ಇವರ ಮಾತು ನಂಬಿದ ಶಾಂತಿ ವಿವಿಧ ಹಂತಗಳಲ್ಲಿ ಆರೋಪಿಗಳಿಗೆ ಬರೋಬ್ಬರಿ ₹4 ಕೋಟಿ ನೀಡಿದ್ದಾರೆ. ಕೆಲ ದಿನಗಳ ಬಳಿಕ ಹಣ ವಾಪಾಸ್‌ ಕೇಳಿದಾಗ ವಂಚಕರ ಗ್ಯಾಂಗ್‌, ಶಾಂತಿ ಅವರಿಗೆ ಜೀವ ಬೆದರಿಕೆ ಹಾಕಿದೆ. ಬಳಿಕ ಶಾಂತಿ ಅವರು ಹೆಬ್ಬಾಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ವರ್ಷಗಳಿಂದ ವಂಚನೆ ದಂಧೆ

ನಾಗೇಶ್ವರ ರಾವ್‌ ದಂಪತಿ ಗ್ಯಾಂಗ್‌ ಕಳೆದ ಆರು ವರ್ಷಗಳಿಂದ ಈ ವಂಚನೆ ದಂಧೆಯಲ್ಲಿ ತೊಡಗಿದೆ. ಆರಂಭದಲ್ಲಿ ಸಂಬಂಧಿಕರು, ಪರಿಚಿತರು, ಸ್ನೇಹಿಯರನ್ನೇ ಟಾರ್ಗೆಟ್‌ ಮಾಡಿ ಹಣ ಪಡೆದು ವಂಚಿಸಿದ್ದಾರೆ. ಚೈನ್‌ ಲಿಂಕ್‌ ವ್ಯವಹಾರ, ಕಡಿಮೆ ಬೆಲೆಗೆ ಭೂಮಿ ಕೊಡಿಸುವ ಆಮಿಷ, ಬ್ಲ್ಯಾಕ್‌ ಆ್ಯಂಡ್ ವೈಟ್‌ ದಂಧೆ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಹಲವರಿಂದ ಕೋಟ್ಯಂತರ ರು. ಪಡೆದು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಈ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.