ಕನ್ನಡಪ್ರಭ ವಾರ್ತೆ ಹಾಸನ
ನಗರದ ಕೆಎಚ್ಬಿ ಬಡಾವಣೆಯಲ್ಲಿರುವ ಚಾಮುಂಡಿ ಹೋಟೆಲ್ನಲ್ಲಿ ಯುವಕನೊಬ್ಬ ಐಸ್ಕ್ರೀಂ ಕೇಳುವ ನೆಪದಲ್ಲಿ ಬಂದು, ಬಳಿಕ ಸಮಯ ನೋಡಿಕೊಂಡು ಕ್ಯಾಶ್ ಬಾಕ್ಸ್ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ ಈ ಎಲ್ಲಾ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಘಟನೆ ಮಂಗಳವಾರ ಸಂಜೆ ಸುಮಾರು ೬:೫೦ರ ಸಮಯದಲ್ಲಿ ನಡೆದಿದ್ದು, ಕಳ್ಳತನದ ಚಾಣಾಕ್ಷತನ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಮಾಹಿತಿ ಪ್ರಕಾರ, ಯುವಕನು ಮೊದಲು ಹೋಟೆಲ್ಗೆ ಬಂದು ಮಾಲೀಕನ ಪತ್ನಿಯ ಬಳಿ ಐಸ್ಕ್ರೀಂ ಕೇಳಿದ್ದಾನೆ. ಆಗ ಐಸ್ಕ್ರೀಂ ಇಲ್ಲ ಎಂದು ತಿಳಿಸಿದ ಮಹಿಳೆಗೆ ಎಲ್ಲಿ ಸಿಗುತ್ತದೆ? ಎಂದು ಕೇಳಿ ಸ್ಥಳದಿಂದ ತೆರಳಿದ್ದಾನೆ. ಈ ಮೂಲಕ ಹೋಟೆಲ್ನ ಒಳಗಿನ ಪರಿಸ್ಥಿತಿ, ಜನರ ಸಂಚಾರ ಇತ್ಯಾದಿಗಳನ್ನು ಅವಲೋಕಿಸಿದ ಯುವಕ, ಕೆಲ ಹೊತ್ತಿನ ಬಳಿಕ ಹೋಟೆಲ್ಗೆ ಮರಳಿದ್ದಾನೆ. ಈ ವೇಳೆ ಹೋಟೆಲ್ನಲ್ಲಿ ಜನಸಂದಣಿ ಕಡಿಮೆಯಾಗಿದ್ದುದನ್ನು ಗಮನಿಸಿದ ಆತ, ಯಾರೂ ಗಮನಿಸದ ಕ್ಷಣದಲ್ಲಿ ಮೊದಲು ಚೇರಿನಲ್ಲಿ ಕುಳಿತು ಕೆಲ ಸಮಯದಲ್ಲೆ ಚೇರನ್ನು ಕೌಂಟರ್ ಬಳಿ ಜರುಗಿಸಿ ನೇರವಾಗಿ ಕ್ಯಾಶ್ ಕೌಂಟರ್ಗೆ ಹೋಗಿ, ಕ್ಯಾಶ್ ಬಾಕ್ಸ್ ತೆರೆದು ಅದರಲ್ಲಿದ್ದ ಹಣವನ್ನು ಕದ್ದುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಘಟನೆ ಸಂಪೂರ್ಣವಾಗಿ ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವಕನ ಚಲನವಲನಗಳು ಸ್ಪಷ್ಟವಾಗಿ ದಾಖಲಾಗಿವೆ.
ಘಟನಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.