ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾ ವಹಿಸಿ: ಶಿಕ್ಷಕರಿಗೆ ಜಿಪಂ ಸಿಇಒ ಕರೆ

| Published : Oct 30 2024, 12:38 AM IST

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾ ವಹಿಸಿ: ಶಿಕ್ಷಕರಿಗೆ ಜಿಪಂ ಸಿಇಒ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಿಥುನ್, ಫಾದರ್ ಮುಲ್ಲರ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥೆ ಡಾ. ಸುಪ್ರಿಯಾ ಹೆಗ್ಡೆ, ಮನೋರೋಗ ತಜ್ಞ ಡಾ.ಕೆರೋಲಿನ್ ಡಿಸೋಜ, ಲಿಂಕ್ ವ್ಯಸನ ಮುಕ್ತ ಕೇಂದ್ರದ ಆಡಳಿತಾಧಿಕಾರಿ ಲಿಡಿಯಾ ಲೋಬೊ ಶಿಕ್ಷಕರಿಗೆ ತರಬೇತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಕ್ಕಳಲ್ಲಿ ಭಯ, ಆತಂಕದಂತಹ ಭಾವನೆಗಳು ಕಂಡುಬಂದರೆ ಮಗುವಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇಂತಹ ಮಕ್ಕಳನ್ನು ಕೂಡಲೆ ಶಿಕ್ಷಕರು ಗಮನಿಸಬೇಕು. ವಿದ್ಯಾರ್ಥಿಯ ಚಲನ ವಲನಗಳನ್ನು ಗಮನಿಸಿ ಅವರಲ್ಲಿ ಆಗುತ್ತಿರುವ ಬದಲಾವಣೆಯನ್ನು ಗುರುತಿಸಿ ಮುಕ್ತವಾಗಿ ಸಮಾಲೋಚನೆ ನಡೆಸಬೇಕು. ಶಿಕ್ಷಕರು ನೀಡುವ ಮಾರ್ಗದರ್ಶನ, ಆತ್ಮವಿಶ್ವಾಸ, ಧೈರ್ಯ ಮಕ್ಕಳ ಮುಂದಿನ ಬದುಕಿಗೂ ಸಹಾಯವಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್‌ ಕೆ. ಸಲಹೆ ನೀಡಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಪ್ರೌಢಶಾಲೆ ಶಿಕ್ಷಕರಿಗೆ ಮಾನಸಿಕ ಆರೋಗ್ಯದ ತರಬೇತಿ ಕಾರ್ಯಗಾರ “ಮನೋಸ್ಥೆರ್ಯ” ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮನೋಸ್ಥೈರ್ಯ ತರಬೇತಿ ಕಾರ್ಯಕ್ರಮವನ್ನು ಶಿಕ್ಷಕರಿಗೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಇರುವ ಮಾನಸಿಕ ರೋಗವನ್ನು ಪತ್ತೆಹಚ್ಚಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಶಿಕ್ಷಕರಿಗೆ ಈ ತರಬೇತಿ ಸಹಾಯವಾಗಲಿದೆ ಎಂದರು. ಮಕ್ಕಳಿಗೆ ಯಾವುದೇ ಮಾದಕ ವಸ್ತುಗಳು ತಲುಪದಂತೆ ನಿಗಾ ವಹಿಸಬೇಕು ಎಂದೂ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಎಸ್. ಪಟಗಾರ್ ಮಾತನಾಡಿ, ಪ್ರತಿಯೊಂದು ಮಗುವಿನ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಶಿಕ್ಷಕನಾದವನು ಇವೆಲ್ಲವನ್ನೂ ತಿಳಿದುಕೊಂಡು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಮಕ್ಕಳ ನಡವಳಿಕೆಯಲ್ಲಿ ಯಾವುದೇ ರೀತಿ ಬದಲಾವಣೆಯಾದರೂ ಶಿಕ್ಷಕರು ತಿಳಿದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಮಾತನಾಡಿ, ಮಕ್ಕಳ ಮಾನಸಿಕ ಅರೋಗ್ಯ ಉತ್ತಮವಾಗಿಸುವ ಕೆಲಸದಲ್ಲಿ ಶಿಕ್ಷಕರೂ ಪಾತ್ರ ವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಿಥುನ್, ಫಾದರ್ ಮುಲ್ಲರ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥೆ ಡಾ. ಸುಪ್ರಿಯಾ ಹೆಗ್ಡೆ, ಮನೋರೋಗ ತಜ್ಞ ಡಾ.ಕೆರೋಲಿನ್ ಡಿಸೋಜ, ಲಿಂಕ್ ವ್ಯಸನ ಮುಕ್ತ ಕೇಂದ್ರದ ಆಡಳಿತಾಧಿಕಾರಿ ಲಿಡಿಯಾ ಲೋಬೊ ಶಿಕ್ಷಕರಿಗೆ ತರಬೇತಿ ನೀಡಿದರು.

ಡಯಟ್ ಉಪನಿರ್ದೇಶಕಿ ರಾಜಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ಸಿ.ಎಂ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಸುಮಂಗಳಾ ಎಸ್ . ನಾಯಕ್, ಮನೋರೋಗ ತಜ್ಞೆ ಡಾ. ಪ್ರಜಕ್ತಾ ವಿ.ರಾವ್ ಇದ್ದರು.