ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ:
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆ ತುಂಬುವುದು ಸೇರಿದಂತೆ ವಿವಿಧ ಯೋಜನೆಗಳ ಮೂಲಕ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಬೇಕು. ಜೂ.15ವರೆಗೆ ವಾರಕ್ಕೊಮ್ಮೆ ಟಾಸ್ಕ್ ಫೊರ್ಸ್ ಸಭೆ ನಡೆಸಿ ನೀರಿನ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ರೂಪಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಯಾವುದೇ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅರ್ಜಿ ನೀಡಿದರೆ ಕೂಡಲೆ ಸ್ಪಂದಿಸಬೇಕು. ಖಾಸಗಿ ಬಾವಿ, ಬೊರ್ವೆಲ್ ಮಾಲೀಕರು ನೀರು ಕೊಡುತ್ತಿದ್ದರೆ ಪಡೆಯಬೇಕು. ಭೀಮಾನದಿಗೆ ನಿರ್ಮಿಸಿದ ಬ್ಯಾರೇಜ್ಗಳಲ್ಲಿ ನೀರು ಪೋಲಾಗದಂತೆ ತಡೆಯಬೇಕು. ಕಾಲುವೆಗಳಿಗೆ ವಿದ್ಯುತ್ ಮೋಟಾರ್ ಅಳವಡಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕಿನ ಬಸನಾಳ, ಅಗಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣ ಅದನ್ನು ಸರಿಪಡಿಸಿದ್ದೇವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಜಲಧಾರೆ ಯೋಜನೆ ಪ್ರಗತಿ ಬಗ್ಗೆ ಪ್ರತಿ ತಿಂಗಳು ಮಾಹಿತಿ ನೀಡಬೇಕು. ಗುಣಮಟ್ಟದ ಕಾಮಗಾರಿ ಮಾಡುವಂತೆ ತಿಳಿಸಿದರು.ಗಾಳಿ ಹೆಚ್ಚಾಗಿರುವ ಕಾರಣ ಲಿಂಬೆ ಬೆಳೆಯ ಹೂವು ಉದುರುತ್ತಿವೆ. ಟೊಂಗೆಗಳು ಒಣಗುತ್ತಿವೆ ಎಂದು ಹೇಳಿದರು. ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತದೆ. ತಾಲೂಕಿನ ಅರ್ಜನಾಳ , ಹಂಜಗಿ ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕು ಹಾಗೂ ಕೆರೆಯ ಮೂಲಕ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಪೂರೈಸಬೇಕು. ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಯಾವುದೇ ಅಡೆ ತಡೆ ಉಂಟಾಗದಂತೆ ಟಾಸ್ಕ್ ಫೋರ್ಸ್ ಸಮಿತಿ ನೋಡಿಕೊಳ್ಳಬೇಕು. ಪ್ರತಿ ಗ್ರಾಮದ ಸಾರ್ವಜನಿಕರ ಸಮಸ್ಯೆಗಳನ್ನು ಎಲ್ಲ ಅಧಿಕಾರಿಗಳು ಆಲಿಸಬೇಕು. ಪ್ರತಿ ವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆ ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ತಾಪಂ ಇಒ ನಂದೀಪ ರಾಠೋಡ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಬೋರ್ವೆಲ್ಗಳನ್ನು ಪರಿಶೀಲಿಸಿ, ಚಾಲ್ತಿಯಲ್ಲಿರುವ ಬೋರ್ವೆಲ್ಗಳ ಮಾಹಿತಿಯನ್ನು ನೀಡಬೇಕು ಹಾಗೂ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಎಲ್ಲಾ ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.ಎಸಿ ಅನುರಾಧಾ ವಸ್ತ್ರದ, ತಾಪಂ ಇಒ ನಂದೀಪ ರಾಠೋಡ, ತಹಸೀಲ್ದಾರ್ ವಿಜಯಕುಮಾರ್ ಕಡಕಭಾವಿ, ಡಿವೈಎಸ್ಪಿ ಜಗದೀಶ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಪಿಡಿಒಗಳು ಸಭೆಯಲ್ಲಿ ಇದ್ದರು.---------
ಕೋಟ್ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸಿದ್ದತೆ, ಪರಿಹಾರ ಕಂಡುಕೊಳ್ಳಬೇಕು. ಬೇಸಿಗೆ ತಾಪಮಾನ ಹೆಚ್ಚಾಗಿದ್ದರಿಂದ 3 ಟಿಎಂಸಿ ಇರುವ ನೀರನ್ನು 6 ಟಿಎಂಸಿಗೆ ಹೆಚ್ಚಿಸಿದ್ದೇವೆ. ನೀರಿನ ಸಮಸ್ಯೆ ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು.ಯಶವಂತರಾಯಗೌಡ ಪಾಟೀಲ, ಶಾಸಕ