ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಐಟಿ ಮತ್ತು ಕಾಮರ್ಸ್ ಫೆಸ್ಟ್ ‘ಪ್ರವೇಗ - 2025’ ಯಶಸ್ವಿಯಾಗಿ ಸಂಪನ್ನಗೊಂಡಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕೃಷ್ಣ ಕ್ಯಾಶ್ಯೂ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಶಿಕ್ಷಣ ಮುಗಿದ ನಂತರ ನಿಮ್ಮ ನಿಜ ಜೀವನ ಆರಂಭವಾಗುತ್ತದೆ. ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಲು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳೆಂದರೆ, ಕನಸು ಕಾಣಬೇಕು, ಮುಂದಿನ ದಿನಗಳಲ್ಲಿ ಅದು ಗುರಿಯಾಗಿ ಬದಲಾಗಬೇಕು. ಗುರಿ ಸಾಧನೆಗೆ ಅಗತ್ಯ ಪೂರ್ವ ಯೋಜನೆ ಹೊಂದಿರಬೇಕು. ಜೊತೆಗೆ ಆತ್ಮಸ್ಥೈರ್ಯವಿರಬೇಕು ಎಂದರು.ಸರಿಯಾದ ಸಮಯಕ್ಕೆ ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸತತ ಪರಿಶ್ರಮ ಪಡುವುದರಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರತಿಭಾ ಎಂ. ಪಟೇಲ್ ಅಧ್ಯಕ್ಷತೆ ವಹಿಸಿದ್ದರು.ಶ್ರೀಕೃಷ್ಣ ಕ್ಯಾಶ್ಯೂ ಇಂಡಸ್ಟ್ರಿಯ ಜನರಲ್ ಮ್ಯಾನೇಜರ್ ಸುಹಾಸ್ ಶೆಟ್ಟಿ, ಎಚ್. ಆರ್. ಮ್ಯಾನೇಜರ್ ಚಂದ್ರಶೇಖರ್, ಅಸಿಸ್ಟೆಂಟ್ ಮ್ಯಾನೇಜರ್ ಪರಾಗ್ ಶೆಟ್ಟಿ ಪಾಲ್ಗೊಂಡಿದ್ದರು.
ಉಪ ಪ್ರಾಂಶುಪಾಲ ಜಯಶೀಲ್ ಕುಮಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಅರ್ಚನಾ ಗದ್ದೆ, ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ವರ್ಣ ರಾಣಿ, ಐಐಸಿ ಸಂಯೋಜಕ, ಗಣಕಶಾಸ್ತ್ರ ಉಪನ್ಯಾಸಕ ಜಿತೇಶ್ ಉಪಸ್ಥಿತರಿದ್ದರು.ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶಿಲ್ಪಶ್ರೀ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಂಕಿತ ಶಣೈ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ‘ಪ್ರವೇಗ 2025’ರ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಗಣಕಶಾಸ್ತ್ರ ಉಪನ್ಯಾಸಕಿ ನಿಶ್ಮಿ ರೈ ವಾಚಿಸಿದರು. ಶ್ರೀನಿಧಿ ವಂದಿಸಿದರು. ನಾಫಿಯಾ ಅಕ್ತಾರಿ ನಿರೂಪಿಸಿದರು.