ಮೂಡುಬಿದಿರೆ: ಬಿ.ಸಿ.ರೋಡ್‌ನಲ್ಲಿ ಯುವತಿಯೊಬ್ಬಳನ್ನು ಕೊಚ್ಚಿ ಕೊಲೆಗೈದ ಘಟನೆ ಬೆನ್ನಲ್ಲೇ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಯುವಕನೊಬ್ಬ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ಪ್ರಸಂಗ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು.ಬಸ್‌ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತಲವಾರು ಹಿಡಿದುಕೊಂಡು ಹೋದ ಯುವಕ ನೇರವಾಗಿ ಮೊಬೈಲ್ ಅಂಗಡಿಯವರಲ್ಲಿ ಗಲಾಟೆಗಿಳಿದಿದ್ದಾನೆ. ಗ್ರಾಹಕರು ಇರುವಾಗಲೇ ತಲವಾರು ಝಳಪಿಸಿದ ಯುವಕನನ್ನು ಅಲ್ಲಿನ ಕೆಲ ಯುವಕರು ಉಪಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲು ಪೆರಿಂಜೆಯವನು ಅಂತ ಹೇಳಿದ ಯುವಕ ಮತ್ತೊಮ್ಮೆ ತನಗೆ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿದ್ದಾಗಿ ಹೇಳಿದ್ದಾನೆನ್ನಲಾಗಿದೆ.

ಆತ ಕೈಯಲ್ಲಿ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿ ಹೋಗುವುದು ಮತ್ತು ಮೊಬೈಲ್ ಅಂಗಡಿಯವರಲ್ಲಿ ಜಗಳ ಮಾಡುವ ವೀಡಿಯೋ ವೈರಲ್ ಆಗಿದೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.