ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ವಿವಿಧ ಧತ್ತಿನಿಧಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಲಾಗಿದೆ. ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಮುಳಿಯ ಶಂಕರ ಭಟ್ಟ, ಗಮಕಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಪದ್ಯಾಣ ಗಣಪತಿ ಭಟ್, ಕಾರ್ಕಳದ ಶಿಲ್ಪಿ ದಿ . ಕೆ.ಶಾಮರಾಯ ಆಚಾರ್ಯ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಗೆ ಪಿ. ದಾಮೋದರ ಆಚಾರ್ಯ ಕಾರ್ಕಳ ಆಯ್ಕೆಯಾಗಿದ್ದಾರೆ. ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕೊಡಮಾಡುತ್ತಿರುವ ವಾರ್ಷಿಕ ಗೌರವ ಪ್ರಶಸ್ತಿಗೆ ಶಕುಂತಳಾ ಭಟ್ ಹಳೆಯಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ. ೧೫ರಂದು ಕಾಂತಾವರದ ‘ಕನ್ನಡ ಭವನ’ದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜೊತೆಗೆ ಪ್ರೊ.ಡಿ.ಎ. ಶಂಕರ್, ಮೈಸೂರು ಅವರಿಗೆ ೨೦೨೫ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ನೀಡಲಾಗುವುದು. ಈ ಮೇಲಿನ ನಾಲ್ಕು ದತ್ತಿನಿಧಿಯ ಪ್ರಶಸ್ತಿಗಳು ರು. ಹತ್ತು ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿದೆ. ವಾರ್ಷಿಕ ಗೌರವ ಪ್ರಶಸ್ತಿಯು ರು. ಐದು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವ ಈ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಕವಿ ಬೆಂಗಳೂರಿನ ಪ್ರೊ.ಟಿ.ಯಲ್ಲಪ್ಪ ಮಾಡುವರು. ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಒಂಬತ್ತು ಹೊಸ ಹೊತ್ತಗೆಗಳನ್ನು ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಎ.ಸುಬ್ಬಣ್ಣ ರೈ ಬಿಡುಗಡೆ ಮಾಡುತ್ತಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.