ಶಿಕ್ಷಕರು ನಿವೃತ್ತರಾದ ನಂತರವೂ ಅವರನ್ನು ಗುರುಗಳಾಗಿಯೇ ಗುರುತಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ. ಶ್ಯಾಮ ಹೆಗ್ಡೆ ಹೇಳಿದರು.

ಮೂಡುಬಿದಿರೆ: ಶಿಕ್ಷಕರು ನಿವೃತ್ತರಾದ ನಂತರವೂ ಅವರನ್ನು ಗುರುಗಳಾಗಿಯೇ ಗುರುತಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ. ಶ್ಯಾಮ ಹೆಗ್ಡೆ ಹೇಳಿದರು.

ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ, ಹೆಚ್ಚಿನ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತದೆ. ಆದರೆ, ಪ್ರೇರಣಾ ಶಾಲೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಆಯೋಜನೆಯಲ್ಲೇ ನಡೆಯುತ್ತಿರುವುದು ನಿಜಾರ್ಥದಲ್ಲಿ ಶಿಕ್ಷಕರಿಗೆ ನೀಡುವ ಗೌರವ ಎಂದು ಹೇಳಿದರು.ಪ್ರೇರಣಾ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಿದ್ದರು. ಶಾಲಾ ನಾಯಕ ಸಾಕೇತ್ ಆಚಾರ್ಯರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಶಾಲಾ ಶಿಕ್ಷಕಿ ಶಶಿಕಲಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ಓಟದ ಸ್ಪರ್ಧೆ, ಹಗ್ಗಜಗ್ಗಾಟ, ತ್ರೋಬಾಲ್, ಅದೃಷ್ಟ ಕುರ್ಚಿ ಸೇರಿದಂತೆ ಸುಮಾರು 12 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

ನಂತರ ಎಲ್ಲಾ ಶಿಕ್ಷಕ-ಶಿಕ್ಷಕಿಯರ ಪಾದಗಳನ್ನು ತೊಳೆದು, ಒರೆಸಿ ಭಾರತೀಯ ಸಂಸ್ಕೃತಿಯಂತೆ ಪಾದಪೂಜೆ ನೆರವೇರಿಸಿ, ಅವರ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳೇ ಶಿಕ್ಷಕ-ಶಿಕ್ಷಕಿಯರಿಗೆ ಭೋಜನ ಬಡಿಸಿ ಗೌರವ ಸಲ್ಲಿಸಿದರು.ಬಹುಮಾನ ವಿತರಣೆ: ನಂತರ ನಡೆದ ಸಭಾ ಕಾರ್ಯಕ್ರಮವೂ ವಿದ್ಯಾರ್ಥಿಗಳ ನೇತೃತ್ವದಲ್ಲೇ ಜರುಗಿತು. ವಿದ್ಯಾರ್ಥಿಗಳೇ ಸ್ಪರ್ಧಾ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಿದರು. ಪ್ರೇರಣಾ ಶಾಲೆಯ ಉಪನಾಯಕಿ ಮನಸ್ವೀ ಶರ್ಮ ಶಿಕ್ಷಕರನ್ನು ಸ್ವಾಗತಿಸಿದರು. ತನಿಷ್ಕ ಬಿ. ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಬಹುಮಾನ ವಾಚನ ಮಾಡಿದರು. ಪ್ರಧಾನ್ ಆರ್. ಭಂಡಾರಿ ಧನ್ಯವಾದ ಸಲ್ಲಿಸಿದರು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಉಡುಗೊರೆ ನೀಡಿ ಆಶೀರ್ವಾದ ಪಡೆದರು. ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಹಾಗೂ ಸೇವಾಂಜಲಿ ಟ್ರಸ್ಟ್‌ನ ಟ್ರಸ್ಟೀ ಡಾ. ಆನಂದ ಕಾರ್ಲ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಎಂ. ಶಾಂತರಾಮ ಕುಡ್ವ ಆಡಳಿತ ಮಂಡಳಿಯ ಪರವಾಗಿ ಎಲ್ಲಾ ಶಿಕ್ಷಕರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದರು.