ಟೌನ್‌ಶಿಪ್ ವಿರೋಧಕ್ಕಿಂತ ಬೆಂಬಲಿಸುವ ರೈತರೇ ಅಧಿಕ !

| Published : May 27 2025, 12:34 AM IST

ಸಾರಾಂಶ

ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿರುವ 1,132 ರೈತರು 2,079 ಎಕರೆ 08 ಗುಂಟೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಇರುವ 583 ರೈತರ 1032 ಎಕರೆ 13 ಗುಂಟೆ ಜಮೀನು ಸೇರಿ ಒಟ್ಟು 1,715 ರೈತರ 3,111 ಎಕರೆ 21 ಗುಂಟೆ ಭೂಮಿ ಮಾತ್ರ ಆಗುತ್ತದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ (ಸಮಗ್ರ ಉಪನಗರ ಯೋಜನೆ)ಗೆ ಭೂ ಮಾಲೀಕರಾದ ರೈತರ ವಿರೋಧಕ್ಕಿಂತ ಬೆಂಬಲವೇ ಹೆಚ್ಚಾಗಿರುವಂತೆ ಕಾಣುತ್ತಿದೆ.

ಇದಕ್ಕೆ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರಾಮಗಳವಾರು ಭೂ ಮಾಲೀಕರಿಂದ ಸಲ್ಲಿಕೆಯಾಗಿರುವ ಆಕ್ಷೇಪಣೆ ಅರ್ಜಿಗಳು ಕಾರಣ. ಸರಿ ಸುಮಾರು 11 ಸಾವಿರ ರೈತರ ಪೈಕಿ ಕೇವಲ 1132 ಮಂದಿಯಿಂದ ಮಾತ್ರ ಭೂ ಸ್ವಾಧೀನಕ್ಕೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

6,389 ಎಕರೆ ಭೂ ಮಾಲೀಕರ ತಕರಾರು ಇಲ್ಲ:ಈಗ ಟೌನ್‌ಶಿಪ್‌ಗಾಗಿ ಒಟ್ಟಾರೆ 9,500 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೀಗ ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿರುವ 1,132 ರೈತರು 2,079 ಎಕರೆ 08 ಗುಂಟೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಇರುವ 583 ರೈತರ 1032 ಎಕರೆ 13 ಗುಂಟೆ ಜಮೀನು ಸೇರಿ ಒಟ್ಟು 1,715 ರೈತರ 3,111 ಎಕರೆ 21 ಗುಂಟೆ ಭೂಮಿ ಮಾತ್ರ ಆಗುತ್ತದೆ. ಅಲ್ಲಿಗೆ ಉಳಿದಂತೆ 6,389 ಎಕರೆ ಭೂಮಿಯ ಮಾಲೀಕರು ಆಕ್ಷೇಪಣೆಯಾಗಲಿ ತಕರಾರು ಅರ್ಜಿಯನ್ನಾಗಲಿ ಸಲ್ಲಿಸಿಯೇ ಇಲ್ಲ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಟೌನ್‌ಶಿಪ್‌ ಅನ್ನು ವಿರೋಧಿಸುವುದಕ್ಕಿಂತ ಅದನ್ನು ಬೆಂಬಲಿಸುವ ಭೂ ಮಾಲೀಕರಾದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಂತಿದೆ.

ಎರಡು ಪ್ರತ್ಯೇಕ ನ್ಯಾಯಾಲಯಗಳ ಸ್ಥಾಪನೆ:

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರ ಆಕ್ಷೇಪಣೆಗಳ ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರೈತರ ಅನುಕೂಲಕ್ಕಾಗಿ ತನ್ನ ಕಚೇರಿ ಆವರಣದಲ್ಲಿಯೇ ಎರಡು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಿದೆ.

ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ 1987ರ ಕಲಂ 17 (5) ಮತ್ತು 17 (6)ರಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಕಚೇರಿಯಿರುವ ರಾಮನಗರದ ಕಂದಾಯ ಭವನದ ಆವರಣದಲ್ಲಿಯೇ ಪ್ರತ್ಯೇಕ ಎರಡು ಸ್ಥಳಗಳಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ - 1ರವರ ನ್ಯಾಯಾಲಯ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ - 2ರವರ ನ್ಯಾಯಾಲಯ ತೆರೆದಿದೆ.

ಈ ವಿಶೇಷ ಭೂಸ್ವಾಧೀನಾಧಿಕಾರಿಗಳ ನ್ಯಾಯಾಲಯವು ಮೇ 28ರಿಂದ ಕಾರ್ಯಾರಂಭ ಮಾಡಲಿದ್ದು, ಪ್ರತಿ ದಿನ 50 ಮಂದಿ ರೈತರ ಅಕ್ಷೇಪಣಾ ಅರ್ಜಿಗಳ ವಿಚಾರಣೆ ನಡೆಯಲಿದೆ. ಭೂ ಮಾಲೀಕರಾದ ರೈತರು ಗೊತ್ತು ಪಡಿಸಿದ ದಿನಾಂಕದಂದು ಖುದ್ಧಾಗಿ ಅಥವಾ ತಮ್ಮ ವಕೀಲರ ಮೂಲಕವಾಗಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ.

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ 2025ರ ಮಾರ್ಚ್ 12ರಂದು ಭೂ ಸ್ವಾಧೀನ ಕುರಿತಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತಂತೆ ಮಾರ್ಚ್ 13ರಂದು ವಿಶೇಷ ರಾಜ್ಯಪತ್ರ ಹಾಗೂ ಮಾರ್ಚ್ 26ರಂದು ಸ್ಥಳೀಯ ದಿನ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಅಂದಿನಿಂದ ಇಲ್ಲಿವರೆಗೆ ಸುಮಾರು 11 ಸಾವಿರ ರೈತರ ಪೈಕಿ ಕೇವಲ 1132 ರೈತರು ಮಾತ್ರ ಆಕ್ಷೇಪಣೆ ಸಲ್ಲಿಸಿದ್ದಾರೆ. ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ 1987ರ ಪ್ರಕಾರ ಆಕ್ಷೇಪಣೆ ಸಲ್ಲಿಸಿದ 60 ದಿನದೊಳಗೆ ವಿಚಾರಣೆ ನಡೆಸಿ ಸಮಜಾಯಿಷಿ ನೀಡಬೇಕಾಗಿದೆ. ಅಲ್ಲದೆ ಪೂರ್ಣ ವಿಚಾರಣೆಯೂ ವಿಡಿಯೋ ರೆಕಾರ್ಡ್ ಆಗಲಿದ್ದು, ರೈತರ ಹೇಳಿಕೆಯನ್ನು ದಾಖಲಿಸಿ ಅವರ ಒಪ್ಪಿಗೆ ಮೇರೆಗೆಯೇ ಸಹಿ ಪಡೆಯಲಾಗುತ್ತದೆ.

ಈ ರೀತಿ ಆಕ್ಷೇಪಣೆ ಸಲ್ಲಿಸಿರುವ ರೈತರನ್ನು ಗ್ರಾಮವಾರು ಗೊತ್ತು ಪಡಿಸಿದ ದಿನಾಂಕದಂದು ವಿಶೇಷ ಭೂಸ್ವಾಧೀನಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಇಲ್ಲಿ ರೈತರು ಮುಕ್ತವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಅವಕಾಶವಿದೆ. ಹಾಗೊಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ತಮ್ಮ ಹೇಳಿಕೆ ಏನೂ ಇರುವುದಿಲ್ಲವೆಂದು ಭಾವಿಸಿ ಕಾನೂನು ರೀತ್ಯಾ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಯಲಿದೆ.

.....ಬಾಕ್ಸ್ .....

11 ಸಾವಿರ ಪೈಕಿ 1132 ರೈತರಿಂದ ಮಾತ್ರ ಆಕ್ಷೇಪಣೆ

ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರಾಮಗಳವಾರು ಒಟ್ಟು 2049 ಅರ್ಜಿಗಳು ಬಂದಿದ್ದು, ಇವರೆಲ್ಲರು 3655 ಎಕರೆ 11 ಗುಂಟೆ ಭೂ ಮಾಲೀಕರಾಗಿದ್ದಾರೆ. ಇದರಲ್ಲಿ 301 ಎಕರೆ 12 ಗುಂಟೆ ಭೂಮಿ ಮಾಲೀಕರಾದ 169 ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿ ಅರ್ಜಿ ಸಲ್ಲಿಸಿದರೆ, 2079 ಎಕರೆ 08 ಗುಂಟೆ ಭೂ ಮಾಲೀಕರಾದ 1132 ರೈತರು ಭೂ ಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.

583 ರೈತರ 1032 ಎಕರೆ 13 ಗುಂಟೆ ಭೂಮಿ ವ್ಯಾಜ್ಯ ನ್ಯಾಯಾಲಯದಲ್ಲಿದ್ದರೆ, ಇನ್ನುಳಿದ 165 ರೈತರ 252 ಎಕರೆ 17 ಗುಂಟೆ ಭೂಮಿ ಕ್ರಯ , ವಿಭಾಗ, ಹಕ್ಕು ಪತ್ರ, ಕರಾರು, ಜಿಪಿಎ ಹಾಗೂ ಇನ್ನಿತರೆ ಕಾರಣಗಳಿಂದ ಬಾಕಿ ಉಳಿದಿದೆ.

-----

ರೈತರು ಸಲ್ಲಿಸಿರುವ ಒಪ್ಪಿಗೆ ಮತ್ತು ಆಕ್ಷೇಪಣೆಗಳ ಅರ್ಜಿ ವಿವರ ಗ್ರಾಮಆಕ್ಷೇಪಣೆಗಳ ಅರ್ಜಿ ಸಂಖ್ಯೆಬೈರಮಂಗಲ559ಕಂಚುಗಾರನಹಳ್ಳಿ215ಕೆ.ಜಿ.ಗೊಲ್ಲರಪಾಳ್ಯ59ಹೊಸೂರು448ಅರಳಾಳುಸಂದ್ರ333ಕೆಂಪಯ್ಯನಪಾಳ್ಯ171ಮಂಡಲಹಳ್ಳಿ12ಬನ್ನಿಗಿರಿ227ವಡೇರಹಳ್ಳಿ25ಒಟ್ಟು2049...ಕೋಟ್ ....

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುವ ರೈತರ ಭೂಮಿಗೆ ನ್ಯಾಯಯುತ ಬೆಲೆ ಕೊಡಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಕಾನೂನಾತ್ಮಕವಾಗಿ ನಡೆಯುತ್ತಿದೆ. ರೈತರು ವದಂತಿಗಳಿಗೆ ಕಿವಿಗೊಡದೆ ವಿಚಾರಣೆಯಲ್ಲಿ ಭಾಗವಹಿಸಿ ತಮ್ಮ ಹೇಳಿಕೆ ದಾಖಲಿಸಬಹುದು. ಪ್ರಾಧಿಕಾರ ಸದಾ ರೈತರೊಂದಿಗೆ ಇರಲಿದೆ.

- ಗಾಣಕಲ್ ನಟರಾಜ್ , ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.

----

26ಕೆಆರ್ ಎಂಎನ್ 1,2,3.ಜೆಪಿಜಿ

1.ಬಿಡದಿ ಟೌನ್ ಶಿಪ್ ನಕ್ಷೆ

2.ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್

3.ಟೌನ್ ಶಿಪ್ ನಿರ್ಮಿಸಲು ಉದ್ದೇಶಿಸಿರುವ ಜಾಗ.