ಸಾರಾಂಶ
ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ನಲ್ಲಿ ಆಯೋಜಿಸಿದ್ದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಿಡ್ಬಿ ಬ್ಯಾಂಕ್ ಜನರಲ್ ಮ್ಯಾನೇಜರ್ ಶ್ರೀಪತಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಿಡ್ಬಿ ಬ್ಯಾಂಕ್ ಹೆಚ್ಚಾಗಿ ಎಂಎಸ್ಎಂಇ ಕ್ಷೇತ್ರಕ್ಕೆ ಆರ್ಥಿಕ ಸೌಲಭ್ಯ ಒದಗಿಸುತ್ತಿದ್ದು, ಹೆಚ್ಚಿನ ಯೋಜನೆಗಳನ್ನು ರೂಪಿಸಿವೆ ಎಂದು ಸಿಡ್ಬಿ ಬ್ಯಾಂಕ್ ಜನರಲ್ ಮ್ಯಾನೇಜರ್ ಶ್ರೀಪತಿ ಅಭಿಪ್ರಾಯಪಟ್ಟರು.ನಗರದ ಮಥುರಾ ಪ್ಯಾರಾಡೈಸ್ನಲ್ಲಿ ಆಯೋಜಿಸಿದ್ದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೋಟೆಲ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎನ್.ಗೋಪಿನಾಥ್ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಆಗಲು ಹಾಸ್ಪಿಟಾಲಿಟಿ ಉದ್ಯಮ ಪ್ರಮುಖ ಪಾತ್ರ ವಹಿಸಲಿದ್ದು, ಹೋಟೆಲ್ಗಳನ್ನು ಉನ್ನತೀಕರಿಸಿಕೊಂಡು ಪ್ರವಾಸೋದ್ಯಮ ಬೆಳೆಸಬೇಕು ಎಂದು ಹೇಳಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಉದ್ಯಮ ಮಾಡಲು ಆಸಕ್ತಿ ಇರುವರಿಗೆ ಅಗತ್ಯ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಇದರಿಂದ ಸಮಗ್ರ ಅಭಿವೃದ್ಧಿಯು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ ಮಾತನಾಡಿ, ಉದ್ಯಮದಾರರು ಬ್ಯಾಂಕ್ನ ಆರ್ಥಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಡಿಜಿಎಂ ಕುಲಶೇಖರ ಹಾಗೂ ಡಿಜಿಎಂ ಓಂಗಳನ್ ಅವರು ಸಿಡ್ಬಿ ಬ್ಯಾಂಕ್ ಮೂಲಕ ಕೈಗಾರಿಕೆ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯಮಿಗಳಿಗೆ ನೀಡುತ್ತಿರುವ ವೈವಿಧ್ಯ ಆರ್ಥಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಿಡ್ಬಿ ಬ್ಯಾಂಕ್ ಶಿವಮೊಗ್ಗ ಮ್ಯಾನೇಜರ್ ಶಿವಕುಮಾರ್ ಮಾತನಾಡಿ, ಬ್ಯಾಂಕ್ನಿಂದ ಇತ್ತೀಚೆಗೆ ಜಾರಿಗೆ ತಂದ ಹೋಟೆಲ್ ಕ್ಷೇತ್ರಕ್ಕೆ ಅನ್ವಯಿಸುವ ಯೋಜನೆ ಬಗ್ಗೆ ವಿವರಿಸಿದರು. ಈ ವೇಳೆ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.