ಸಾರಾಂಶ
ಬೆಂಗಳೂರು : ಫೆಬ್ರವರಿ ಆರಂಭದಿಂದಲೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಮಾರ್ಚ್ನಿಂದ ಬೇಸಿಗೆ ಆರಂಭಗೊಳ್ಳಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಹಾಗೂ ಸೆಕೆ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಈಗಾಗಲೇ ರಾಜಧಾನಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಪ್ರಮಾಣದಲ್ಲಿ ಏರಿಕೆಯಾಗಿದೆ. ಗರಿಷ್ಠ ಉಷ್ಣಾಂಶ ಬೆಂಗಳೂರಿನಲ್ಲಿ 32 ಡಿ.ಸೆ. ದಾಟಿದೆ. ಮುಂದಿನ ದಿನಗಳಲ್ಲಿ ಬಿಸಿಲ ತಾಪ ಇನ್ನಷ್ಟು ಹೆಚ್ಚಾಗಲಿದೆ. ಅದರಲ್ಲೂ ಮಾರ್ಚ್ನಿಂದ ಬೇಸಿಗೆ ಆರಂಭಗೊಳ್ಳಲಿದ್ದು ಆಗ ಬಿಸಿಲು ಹಾಗೂ ಗರಿಷ್ಠ ಉಷ್ಣಾಂಶ ಇನ್ನಷ್ಟು ಏರಿಕೆ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.
ಈ ಬಾರಿ ಮಳೆ, ಅದೇ ರೀತಿ ಚಳಿ ಪ್ರಮಾಣವೂ ಹೆಚ್ಚಾಗಿತ್ತು. ಇನ್ನು ಬೇಸಿಗೆಯ ಬಿಸಿಲು, ಸೆಕೆಯೂ ಅಧಿಕವಾಗಿರಲಿದೆ. ಈಗಾಗಲೇ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಹಾಗೂ ಕನಿಷ್ಠ ಉಷ್ಣಾಂಶ ಹೆಚ್ಚಾಗಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ವಾಡಿಕೆಗಿಂತ 4 ಡಿ.ಸೆ. ಹೆಚ್ಚು:
ಕಳೆದ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆ ಕನಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 4 ಡಿ.ಸೆ. ವರೆಗೆ ಕಡಿಮೆ ದಾಖಲಾಗಿದೆ. ದಕ್ಷಿಣ ಒಳನಾಡು, ಕರಾವಳಿಯ ಕೆಲ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ 1 ರಿಂದ 3 ಡಿ.ಸೆ. ವರೆಗೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಲಬುರಗಿಯಲ್ಲಿ 37.6 ಡಿ.ಸೆ. ಅತಿಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾದರೆ, ಚಾಮರಾಜನಗರದಲ್ಲಿ 13.4 ಡಿ.ಸೆ. ಅತಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇನ್ನು ಬೆಂಗಳೂರಿನಲ್ಲಿ 32.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 1.4 ಡಿ.ಸೆ. ಹೆಚ್ಚಾಗಿದೆ. ಅದೇ ರೀತಿ ದಾವಣಗೆರೆಯಲ್ಲಿ 36.2 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 3.2 ಡಿ.ಸೆ. ಹೆಚ್ಚು. ಕಲಬುರಗಿಯಲ್ಲಿ 37.6 ಡಿ.ಸೆ. ಗರಿಷ್ಠ ಉಷ್ಣಾಂಶ(ವಾಡಿಕೆಗಿಂತ 2.6 ಡಿ.ಸೆ. ಹೆಚ್ಚು) ದಾಖಲಾಗಿದ್ದು, ಬಾಗಲಕೋಟೆಯಲ್ಲಿ 34.3 ಗರಿಷ್ಠ ಉಷ್ಣಾಂಶ(ವಾಡಿಕೆಗಿಂತ 2.2.ಡಿ.ಸೆ. ಹೆಚ್ಚು) ದಾಖಲಾಗಿದ್ದು, ಗದಗದಲ್ಲಿ 35.1 ಗರಿಷ್ಠ ಉಷ್ಣಾಂಶ(ವಾಡಿಕೆಗಿಂತ 2.1ಡಿ.ಸೆ.ಹೆಚ್ಚು) ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- ಫೆಬ್ರವರಿಗೇ ಚಳಿ ಮಾಯ । ದಿನದಿಂದ ದಿನಕ್ಕೆ ಬಿಸಿಲ ‘ಝಳ’ಕ । ಮಾರ್ಚ್ನಿಂದ ಮತ್ತಷ್ಟು ಸುಡಲಿದೆ ಕರುನಾಡು- ಅಧಿಕ ಮಳೆ, ಚಳಿ ಬಳಿಕ ಈ ಬಾರಿ ಬಿರುಬಿಸಿಲು । ಹಲವೆಡೆ ಕನಿಷ್ಠ ಉಷ್ಣಾಂಶ ವಾಡಿಕೆಗಿಂತ 4 ಡಿಗ್ರಿವರೆಗೂ ಜಿಗಿತ
ಎಲ್ಲಿ ಎಷ್ಟು ತಾಪ? (ಡಿಗ್ರಿ ಸೆಲ್ಶಿಯಸ್ನಲ್ಲಿ) ನಗರ ಉಷ್ಣಾಂಶ ವಾಡಿಕೆಗಿಂತ ಹೆಚ್ಚು
ಬೆಂಗಳೂರು 32.81.4
ದಾವಣಗೆರೆ 36.23.2
ಕಲಬುರಗಿ 37.62.6
ಬಾಗಲಕೋಟೆ 37.62.6
ಗದಗ 35.12.1