ನಗರದಲ್ಲಿ ಹೆಚ್ಚಿನ ದರೋಡೆ ಪ್ರಕರಣ : ಶಿಸ್ತು ಕ್ರಮಕ್ಕೆ ಬಸನಗೌಡ ಪಾಟೀಲ ಯತ್ನಾಳ ಒತ್ತಾಯ

| N/A | Published : Feb 02 2025, 01:04 AM IST / Updated: Feb 02 2025, 11:31 AM IST

ಸಾರಾಂಶ

 ವಿಜಯಪುರ ನಗರದಲ್ಲಿ ಇತ್ತೀಚೆಗೆ ನಿತ್ಯ ಮನೆಗಳ್ಳತನ, ಸುಲಿಗೆ ಪ್ರಕರಣಗಳು ಮೀತಿ ಮೀರಿದ್ದು, ಇದರಿಂದ ಜನರು ಆತಂಕದಲ್ಲಿ ಜೀವನ ಸಾಗಿಸುವ ಸ್ಥಿತಿ ಬಂದಿದೆ. ಅದು ಹೋಗಲಾಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

  ವಿಜಯಪುರ : ನಗರದಲ್ಲಿ ಇತ್ತೀಚೆಗೆ ನಿತ್ಯ ಮನೆಗಳ್ಳತನ, ಸುಲಿಗೆ ಪ್ರಕರಣಗಳು ಮೀತಿ ಮೀರಿದ್ದು, ಇದರಿಂದ ಜನರು ಆತಂಕದಲ್ಲಿ ಜೀವನ ಸಾಗಿಸುವ ಸ್ಥಿತಿ ಬಂದಿದೆ. ಅದು ಹೋಗಲಾಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಮನೆಗೆ ನುಗ್ಗಿದ್ದ ದರೋಡೆಕೋರರು ತಡೆಯಲು ಬಂದ ಮನೆಯ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಗಾಯಾಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಘಟನೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ವಿವಿಧ ಬಡಾವಣೆ, ಕಾಲೊನಿಗಳಲ್ಲಿ ಮಧ್ಯರಾತ್ರಿ ನಾಲ್ಕೈದು ಜನರ ದರೋಡೆಕೋರ ತಂಡ ಓಡಾಡುತ್ತಿದ್ದಾರೆ ಎಂದು ಅನೇಕರು ದೂರು ನೀಡಿದ್ದಾರೆ.

 ಸಾರ್ವಜನಿಕರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ನಗರದ ಎಲ್ಲ ಭಾಗಗಳಲ್ಲಿ ಹಾಗೂ ವಿಶೇಷವಾಗಿ ನಗರ ಹೊರವಲಯದಲ್ಲಿ ಹೊಸದಾಗಿ ಅಭಿವೃದ್ಧಿಗೊಂಡಿರುವ ಬಡಾವಣೆ, ಕಾಲೋನಿಗಳಲ್ಲಿ ಪೊಲೀಸ್ ಬೀಟ್ ನಿಯೋಜಿಸಿ, ರಾತ್ರಿ ಎರಡ್ಮೂರು ಬಾರಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಕೇವಲ ಪ್ರಕರಣ ದಾಖಲು ಮಾಡಿದರೆ ಸಾಲದು, ಅಗತ್ಯವಿದ್ದಲ್ಲಿ ಆಯುಧಗಳ ಮೂಲಕವೂ ಉತ್ತರಿಸಬೇಕು. ಆಗ ತಪ್ಪು ಮಾಡುವವರಿಗೆ ಎಚ್ಚರಿಕೆ ಬರಲಿದೆ. ಜೊತೆಗೆ ಭಯದಲ್ಲಿರುವ ಜನರಿಗೆ ಧೈರ್ಯ ಬರಲಿದೆ. ಹೀಗಾಗಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಳ್ಳರು, ದರೋಡೆಕೋರರ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಿ, ಹಾಳಾಗಿದ್ದರೆ ತಕ್ಷಣ ಸರಿಪಡಿಸಬೇಕು. ಮಹಾನಗರ ಪಾಲಿಕೆಯವರು ಎಲ್ಲ ಪ್ರದೇಶಗಳಲ್ಲಿ ಬೀದಿ ದೀಪಗಳು ಬೆಳಗುವಂತೆ ನೋಡಿಕೊಳ್ಳಬೇಕು. ಸಮಸ್ಯೆ ಇದ್ದರೆ ತಕ್ಷಣ ದುರಸ್ತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.