- ಎಚ್.ಕಲ್ಪನಹಳ್ಳಿ ಬಳಿ ತೋಟದ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸಿಲಿಂಡರ್‌ಗಳು

- ದೊಗ್ಗಳ್ಳಿ ಶಿವಕುಮಾರ್‌ಗೆ ಸೇರಿದ ತೋಟ, ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದ ಗ್ರಾಮಸ್ಥರು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿಲಿಂಡರ್ ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಎಂಟಕ್ಕೂ ಹೆಚ್ಚು ಸಿಲಿಂಡರ್‌ಗಳು ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಎಚ್.ಕಲ್ಪನಹಳ್ಳಿ ಗ್ರಾಮದ ಬಳಿ ಅಡಕೆ ತೋಟವೊಂದರಲ್ಲಿ ಸೋಮವಾರ ಸಂಭವಿಸಿದೆ.

ತಾಲೂಕಿನ ಎಚ್.ಕಲ್ಪನಹಳ್ಳಿ ಗ್ರಾಮದ ದೊಗ್ಗಳ್ಳಿ ಶಿವಕುಮಾರ ಎಂಬವರಿಗೆ ಸೇರಿದ ಅಡಕೆ ತೋಟದಲ್ಲಿ ನಿರ್ಮಿಸಿರುವ ಗೋದಾಮಿನಲ್ಲಿ ದೊಗ್ಗಳ್ಳಿ ಶಿವಕುಮಾರ್‌ಗೆ ಸೇರಿದ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಘಟನೆಯಲ್ಲಿ ಗೋದಾಮಿನಲ್ಲಿದ್ದ ಅನಿಲ್‌ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೋಡ ನೋಡುತ್ತಿದ್ದಂತೆಯೇ ಬೆಂಕಿ ಕೆನ್ನಾಲಿಗೆಯು ವ್ಯಾಪಿಸಿ, ಇಡೀ ಗೋದಾಮನ್ನು ಆವರಿಸಿತು. 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಫೋಟಗೊಂಡಿದ್ದು, ಏಜೆನ್ಸೀಸ್‌ನ ಅನಿಲ್ ಸೇರಿದಂತೆ ಮೂವರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲು ಮಾಡಲಾಗಿದೆ.

ನಿಗದಿಗಿಂತಲೂ ಹೆಚ್ಚಿನ ಸಿಲಿಂಡರ್‌ಗಳನ್ನು ಅಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹರಸಾಹಸಪಟ್ಟು ಬೆಂಕಿ ನಿಯಂತ್ರಣಕ್ಕೆ ತರುವಲ್ಲಿ ಸಫಲರಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನಾ ಸ್ಥಳದಲ್ಲಿ ಒಂದಾದ ನಂತರ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಬೆಂಕಿಯುಂಡೆಗಳು ಆಕಾಶವನ್ನು ಮುಟ್ಟುವಂತೆ ಸದ್ದು ಮಾಡಿ, ಉರಿಯುತ್ತಿದ್ದವು. ಈ ದೃಶ್ಯಗಳು ಕೆಲಕಾಲ ಸ್ಥಳೀಯರು, ಗ್ರಾಮಸ್ಥರನ್ನು ತೀವ್ರ ಭಯಕ್ಕೀಡು ಮಾಡಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-15ಕೆಡಿವಿಜಿ4: ದಾವಣಗೆರೆ ತಾ. ಎಚ್‌.ಕಲ್ಪನಹಳ್ಳಿ ಗ್ರಾಮದ ಅಡಕೆ ತೋಟವೊಂದರ ಬಳಿ ಸಿಲಿಂಡರ್ ಗೋದಾಮಿನಲ್ಲಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಳ್ಳುತ್ತಿರುವುದು. -15ಕೆಡಿವಿಜಿ5, 6: ದಾವಣಗೆರೆ ತಾ. ಎಚ್‌.ಕಲ್ಪನಹಳ್ಳಿ ಗ್ರಾಮದ ಅಡಕೆ ತೋಟವೊಂದರ ಬಳಿ ಸಿಲಿಂಡರ್ ಗೋದಾಮಿನಲ್ಲಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡು, ಬೆಂಕಿ ಹೊತ್ತಿರುವುದು. -15ಕೆಡಿವಿಜಿ7, 8: ದಾವಣಗೆರೆ ತಾ. ಎಚ್‌.ಕಲ್ಪನಹಳ್ಳಿ ಗ್ರಾಮದ ಅಡಕೆ ತೋಟದಲ್ಲಿ ಸಿಲಿಂಡರ್ ಗೋದಾಮಿನಲ್ಲಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಸಿಲಿಂಡರ್‌ಗಳು ಗುರುತು ಸಿಗದಂತೆ ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಬಿದ್ದಿರುವುದು.

-15ಕೆಡಿವಿಜಿ0, 10, 11: ದಾವಣಗೆರೆ ತಾ. ಎಚ್‌.ಕಲ್ಪನಹಳ್ಳಿ ಗ್ರಾಮದ ಅಡಕೆ ತೋಟವೊಂದರ ಬಳಿ ಸಿಲಿಂಡರ್ ಗೋದಾಮಿನಲ್ಲಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ.