ಕುಂದಾಪುರ: ಇಲ್ಲಿನ ಶಂಕರನಾರಾಯಣದ ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ ಬುಕ್ ಟೆಕ್ ಸೊಲ್ಯೂಷನ್ ಸಂಸ್ಥೆಯ ಸಹಯೋಗದಲ್ಲಿ ಏ 17 ಮತ್ತು 18ರಂದು ರಿಮೋಟ್ ಕಂಟ್ರೋಲ್ (ಆರ್‌ಸಿ)ವಿಮಾನ ನಿರ್ಮಾಣ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. 15 - 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಏರೋನಾಟಿಕಲ್ ಎಂಜಿನಿಯರಿಂಗ್‌ನ ಮೂಲಭೂತ ತತ್ವಗಳು ಹಾಗೂ ವಿಮಾನ ನಿರ್ಮಾಣದ ಪರಿಚಯ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಣಿಪಾಲ ಎಂಐಟಿಯ ವಿಮಾನ ವಾಸ್ತುಶಾಸ್ತ್ರ ತಜ್ಞ ಮಧುಸೂಧನ್ ಬಿ. ಅವರು, ಇಂತಹ ತಾಂತ್ರಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿ ಪರಿಚಯಿಸುವುದು ಬಹಳ ಉಪಯುಕ್ತವಾಗಿದ್ದು, ಇದರಿಂದ ಅವರಲ್ಲಿ ಹೊಸ ಆಸಕ್ತಿ ಮೂಡಿ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.ಬೆಂಗಳೂರಿನ ಎಂ.ಎಸ್. ರಾಮಯ್ಯ ವಿವಿಯ ಯುವ ಏರೋಸ್ಪೇಸ್ ಎಂಜಿನಿಯರ್‌ಗಳಾದ ಕಾರ್ತಿಕ್ ಆರ್. ಪಿ., ಯಶ್ ಆರ್ಯನ್ ಮತ್ತು ನವನೀತ್ ಅರಸು ಕಾರ್ಯಾಗಾರ ನಡೆಸಿಕೊಟ್ಟರು. ಮೊದಲ ದಿನ ವಿದ್ಯಾರ್ಥಿಗಳಿಗೆ ವಿಮಾನಗಳ ವಿನ್ಯಾಸ, ಕಾರ್ಯವಿಧಾನ ಮತ್ತು ಹಾರಾಟದ ವೈಜ್ಞಾನಿಕ ತತ್ವಗಳ ಕುರಿತು ಮಾಹಿತಿ ನೀಡಲಾಯಿತು.

ನಂತರ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಭಜಿಸಿ, ತಮ್ಮದೇ ರಿಮೋಟ್ ಕಂಟ್ರೋಲ್ ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು. ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಮದರ್ ತೆರೆಸಾ ಸಂಸ್ಥೆಯ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ದೂರದ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು.ಎರಡನೇ ದಿನ, ವಿದ್ಯಾರ್ಥಿಗಳು ತಾವು ನಿರ್ಮಿಸಿದ ವಿಮಾನಗಳನ್ನು ಹಾರಿಸಿ ಪ್ರಾಯೋಗಿಕ ಅನುಭವ ಪಡೆದು ತಮ್ಮ ಪರಿಶ್ರಮದ ಫಲವನ್ನು ನೇರವಾಗಿ ಅನುಭವಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ನವೀನ ಹಾಗೂ ಅನುಭವಾತ್ಮಕ ಶಿಕ್ಷಣಾವಕಾಶಗಳನ್ನು ನಿರಂತರವಾಗಿ ಒದಗಿಸುತ್ತಾ ಬರುತ್ತಿರುವ ಮದರ್ ತೆರೆಸಾ ಶಿಕ್ಷಣ ಸಂಸ್ಥೆ, ತನ್ನ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿ ಕೇಂದ್ರಿತ ದೃಷ್ಟಿಕೋನದ ಮೂಲಕ ಹಮ್ಮಿಕೊಂಡಿದ್ದ ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳ ಬಗ್ಗೆ ಉತ್ತಮ ಅರಿವು ನೀಡುವುದರ ಜೊತೆಗೆ, ಭವಿಷ್ಯದ ವೃತ್ತಿ ಆಯ್ಕೆಗಳಿಗೆ ಪ್ರೇರೇಪಿಸಿಲು ಸಹಕಾರಿಯಾಗಿ ಹೊರಹೊಮ್ಮಿತು.