ಕುಡಿಯಲು ಹಣ ಕೊಡದಿದ್ದಕ್ಕೆ ಗೋಡೆಗೆ ಗುದ್ದಿ ತಾಯಿಯ ಹತ್ಯೆ

| Published : Aug 05 2024, 12:35 AM IST

ಕುಡಿಯಲು ಹಣ ಕೊಡದಿದ್ದಕ್ಕೆ ಗೋಡೆಗೆ ಗುದ್ದಿ ತಾಯಿಯ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನು ಗೋಡೆಗೆ ಗುದ್ದಿ ಹತ್ಯೆಗೈದ ಧಾರುಣ ಘಟನೆ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನು ಗೋಡೆಗೆ ಗುದ್ದಿ ಹತ್ಯೆಗೈದ ಧಾರುಣ ಘಟನೆ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮಹಾದೇವಿ ಗುರಪ್ಪ ತೋಲಗಿ (70) ಕೊಲೆಯಾದ ದುರ್ದೈವಿ. ಈರಣ್ಣ ಗುರಪ್ಪ ತೋಲಗಿ (34) ಕೊಲೆ ಆರೋಪಿ. ತಂದೆ 15 ವರ್ಷರ್ಗಳ ಹಿಂದೆ ಸಾವಿಗೀಡಾಗಿದ್ದು, ತಾಯಿ ಹೆಸರಿನಲ್ಲಿದ್ದ ಒಂದು ಎಕರೆ ಜಮೀನು ವಿಚಾರವಾಗಿ ಪ್ರತಿದಿನ ಈರಣ್ಣ ಸಾರಾಯಿ ಕುಡಿದು ಬಂದು ತಾಯಿಯ ಜೊತೆ ಜಗಳ ಮಾಡುತ್ತಿದ್ದ. ಇಬ್ಬರು ಸಹೋದರಿಯರು ಕೂಡ ತಮ್ಮ ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದರು. ಇದೇ ವಿಚಾರವಾಗಿ ಶನಿವಾರ ತಡರಾತ್ರಿ ಮದ್ಯದ ಅಮಲಿನಲ್ಲಿದ್ದ ಈರಣ್ಣ ತೋಲಗಿ ತಾಯಿಯ ಜೊತೆ ಸರಾಯಿ ಕುಡಿಯಲು ಹಣ ಕೊಡು ಮತ್ತು ಆಸ್ತಿ ನನ್ನ ಹೆಸರಲ್ಲಿ ಮಾಡು ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿನ ನೀರು ಕಾಯಿಸುವ ಒಲೆಯಲ್ಲಿದ್ದ ಅರ್ಧ ಸುಟ್ಟಿದ್ದ ಕಟ್ಟಿಗೆ ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆದು, ಗೋಡೆಗೆ ಗುದ್ದಿಸಿದ್ದರಿಂದ ಗಂಭೀರ ಗಾಯಗೊಂಡಿದ್ದ ಮಹಾದೇವಿ ಸ್ಥಳದಲ್ಲೇ ಅಸುನೀಗಿದ್ದಾರೆ. ರಾತ್ರಿ ಅವಳನ್ನು ಲೆಕ್ಕಿಸದೆ ಗ್ರಾಮದಲ್ಲೇ ಹೊರಗೆ ತೆರಳಿದ್ದಾನೆ. ಬೆಳಗಿನ ಜಾವ ಅಕ್ಕ ಪಕ್ಕದವರು ಮಹಾದೇವಿ ಅವರು ಇನ್ನೂ ಎದ್ದಿಲ್ಲ ಎಂದು ಮನೆಯಲ್ಲಿ ನೋಡಿದಾಗ ಶವವಾಗಿದ್ದನ್ನು ಕಂಡು ಪೊಲೀಸ್‌ ಠಾಣೆಗೆ ತಿಳಿಸಿದ್ದಾರೆ.

ಮಗ ಈರಣ್ಣ ತಮಿಳುನಾಡಿನ ಮೂಲದ ಮಹಿಳೆಯನ್ನು ಮದುವೆಯಾಗಿ ಅಲ್ಲಿಯೇ ತಂಗಿದ್ದ. ಅಲ್ಲಿಯೂ ಪತ್ನಿಯೊಂದಿಗೆ ಜಗಳ ಮಾಡಿ ವಾಡಿಕೊಂಡು ಒಂದು ವರ್ಷದಿಂದ ಉಡಿಕೇರಿಯಲ್ಲಿಯೇ ನೆಲೆಸಿ ಕೃಷಿ ಕೆಲಸ ಮಾಡುತ್ತಿದ್ದು, ಕುಡಿತಕ್ಕೆ ಅಂಟಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ರಾತ್ರಿಯೇ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಶ್ರುತಿ ಎಸ್.ವಿ., ಡಿವೈಎಸ್ಪಿ ರವಿ ನಾಯಕ್, ಸಿಪಿಐ ರಾಘವೇಂದ್ರ ಹವಾಲ್ದಾರ, ದೊಡವಾಡ ಪೊಲೀಸ್ ಠಾಣೆ ಪಿಎಸ್‌ಐಗಳಾದ ನಂದೀಶ ಹಾಗೂ ಪ್ರವೀಣ ಕೋಟಿ ಭೇಟಿ ನೀಡಿದ್ದಾರೆ.