ರಾಷ್ಟ್ರದ ರಕ್ಷಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸಲ್ಲಿಸುತ್ತಿರುವ ಅಮೂಲ್ಯ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದ, ಭಾರತೀಯ ಸೇನೆ ಹಾಗೂ ಬೀದರ್ನ ಗುರುನಾನಕ್ ಶಿಕ್ಷಣ ಸಂಸ್ಥೆ ನಡುವೆ ಸೇನಾ ಸಿಬ್ಬಂದಿಯ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಕುರಿತು ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್ರಾಷ್ಟ್ರದ ರಕ್ಷಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸಲ್ಲಿಸುತ್ತಿರುವ ಅಮೂಲ್ಯ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದ, ಭಾರತೀಯ ಸೇನೆ ಹಾಗೂ ಬೀದರ್ನ ಗುರುನಾನಕ್ ಶಿಕ್ಷಣ ಸಂಸ್ಥೆ ನಡುವೆ ಸೇನಾ ಸಿಬ್ಬಂದಿಯ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಕುರಿತು ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಮಾಡಲಾಯಿತು.ಈ ಒಪ್ಪಂದದ ಅನ್ವಯ, ಗುರುನಾನಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಸೇವೆಯಲ್ಲಿರುವ ಹಾಗೂ ನಿವೃತ್ತ ಸೇನಾ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನದೊಂದಿಗೆ 10 ಶೈಕ್ಷಣಿಕ ಸೀಟುಗಳನ್ನು ಮೀಸಲಿಡಲಾಗಿದೆ. ಸೇನಾ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವುದು ಹಾಗೂ ದೇಶದ ಸೇವೆಗಾಗಿ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ಸಲ್ಲಿಸುತ್ತಿರುವ ಸಮರ್ಪಣೆ, ತ್ಯಾಗ ಮತ್ತು ಸೇವೆಯನ್ನು ಗುರುತಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ನಗರದ ಮೈಲೂರ್ ರಸ್ತೆಯಲ್ಲಿರುವ ಗುರು ನಾನಕ ದೇವ್ ಇಂಜಿನೀಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ ಭಾರತೀಯ ಸೇನೆಯ ಪರವಾಗಿ ಕರ್ನಲ್ ದೇವೇಂದ್ರ ವಶಿಷ್ಠ ಹಾಗೂ ಗುರುನಾನಕ್ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಬಲಬೀರ್ ಸಿಂಗ್ ಅವರು ಉಭಯ ಸಂಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಸ್.ಬಲಬೀರ್ ಸಿಂಗ್, ರಾಷ್ಟ್ರದ ಸೇವೆಯಲ್ಲಿ ಭಾರತೀಯ ಸೇನೆ ಸಲ್ಲಿಸುತ್ತಿರುವ ಅಮೂಲ್ಯ ಕೊಡುಗೆ, ತ್ಯಾಗ ಮತ್ತು ಸಮರ್ಪಣೆಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕೈಗೊಂಡಿರುವುದು ಒಂದು ವಿನಮ್ರ ಹಾಗೂ ಅರ್ಥಪೂರ್ಣ ಪ್ರಯತ್ನವಾಗಿದೆ. ದೇಶದ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ವೀರ ಯೋಧರು ಹಾಗೂ ಅವರ ಕುಟುಂಬಗಳ ಬಗ್ಗೆ ಗೌರವ, ಕೃತಜ್ಞತೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ತಿಳಿಸಿದರು.ಸಶಸ್ತ್ರ ಪಡೆಗಳೊಂದಿಗೆ ಗುರು ನಾನಕ ಶಿಕ್ಷಣ ಸಂಸ್ಥೆ ಮಾಡಿಕೊಂಡಿರುವ ಎರಡನೇ ಮಹತ್ವದ ಒಪ್ಪಂದ ಇದಾಗಿದ್ದು, ಇದಕ್ಕೂ ಮೊದಲು 2023ರಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಇದೇ ರೀತಿಯ ಒಪ್ಪಂದ ಮಾಡಿಕೊಂಡಿತ್ತು. ರಕ್ಷಣಾ ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಸಂಸ್ಥೆ ಮತ್ತಷ್ಟು ಬಲಪಡಿಸಿದೆ.ಈ ಸಂದರ್ಭಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್, ವಿಟಿಯು ಸದಸ್ಯ ಎಸ್.ಪವೀತ್ ಸಿಂಗ್, ಮಾಜಿ ಕರ್ನಲ್ ಆರ್.ಡಿ.ಸಿಂಗ್, ರಾಜಶೇಖರ್ ಗಾಯತೊಂಡ್, ಡಾ. ಹರೀಶ್ ಜ್ಯೋಷಿ, ಡಾ.ದಯಾನಂದ ಮತ್ತು ಡಾ. ಉಮಾಶಂಕರ ಉಪಸ್ಥಿತರಿದ್ದರು.