ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಎಲ್ಲರೂ ಸಹಕಾರ ತತ್ವ ಅಳವಡಿಸಿಕೊಂಡು ಅತಂತ್ರದಿಂದ ಸ್ವತಂತ್ರದ ಕಡೆಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.ತಾಲೂಕಿನ ಕಲ್ಕುಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಮತ್ತು ಮಳಿಗೆಗಳು ಹಾಗೂ ಕಚೇರಿ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಸಹಕಾರ ತತ್ವದಲ್ಲಿ ಒಬ್ಬರಿಗೊಬ್ಬರಿಗೆ ಆಸರೆಯಾಗಿ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಬೇಕು. ಸಹಕಾರ ತತ್ವ ತಮಗೆ ತಾವೇ ಅಳವಡಿಸಿಕೊಂಡು ಅತಂತ್ರದಿಂದ ಸ್ವತಂತ್ರದ ಕಡೆಗೆ ಹೆಜ್ಜೆ ಹಾಕಬೇಕು ಎಂದರು.
ಕೇಂದ್ರದ ಬಜೆಟ್ನಲ್ಲಿ ರಾಜ್ಯಕ್ಕೆ ಕೇವಲ ಶೇ.13 ಮಾತ್ರ ಹಣಕಾಸು ಸೌಲಭ್ಯ ನೀಡಿದೆ. ಆದರೆ, ಶೇ.300ರಿಂದ 400ರಷ್ಟು ಪಾಲನ್ನು ಉತ್ತರ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಇಂಥ ತಾರತಮ್ಯದ ಮೂಲಕ ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವುದು ಕೇಂದ್ರ ಸರ್ಕಾರ ಹುನ್ನಾರ ಮಾಡಿದೆ ಎಂದು ದೂರಿದರು.ಪ್ರಸ್ತುತ ನೀರನ್ನು ಮಿತವಾಗಿ ಬಳಸಬೇಕು. ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ಜಾತ್ರೆಗಳು ಹಾಗೂ ಹಬ್ಬಗಳು ಬರಲಿವೆ. ಸ್ವಚ್ಛತೆ ಕಾಪಾಡಿಕೊಂಡು ಆಹಾರ ಸೇವಿಸಬೇಕು ಎಂದರು.
ತಾಲೂಕಿನ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಕಾರ್ಯಕ್ಕೆ ಚಾಲನೆ ನೀಡುವ ಕಾಲ ಕೂಡಿಬಂದಿದೆ. ಈಗಾಗಲೇ ಅಭಿವೃದ್ಧಿಗೆ ಬೇಕಾದ ಯೋಜನಾ ವರದಿ ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಪಡೆದಿದ್ದು, ಮುಂದಿನ ದಿನಗಳಲ್ಲಿ 100 ಕೋಟಿ ರು.ವೆಚ್ಚದಲ್ಲಿ ಈ ಭಾಗದ ರೈತರ ಬಹುದಿನಗಳ ಕನಸು ನಾಲಾ ಆಧುನೀಕರಣಕ್ಕೆ ಮುಂದಾಗಲಿದ್ದೇವೆ ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಸಹಕಾರ ಸಂಘದ ಅಧ್ಯಕ್ಷ ಎಂ.ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭಾರತಿ ಸುರೇಶ್, ಎಂಡಿಸಿಸಿ ಬ್ಯಾಂಕ್ನ ಸಿಇಒ ಸಿ.ವನಜಾಕ್ಷಿ, ಕಿರುಗಾವಲು ವೃತ್ತದ ಮೇಲ್ವಿಚಾರಕ ಕೆ.ಎಸ್.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜು, ಸಂಘದ ಉಪಾಧ್ಯಕ್ಷ ಚಿಕ್ಕಹೊನ್ನಯ್ಯ, ನಿರ್ದೇಶಕರಾದ ಕೆ.ಜೆ. ದೇವರಾಜು, ಕೃಷ್ಣಮೂರ್ತಿ, ಸಿ.ಟಿ.ಪುಟ್ಟಸ್ವಾಮಿ, ಅಮೀರ್ ಖಾನ್, ನಾಗೇಂದ್ರ, ಕೆ.ಮಹದೇವ್, ಜಿ.ಕೃಷ್ಣ, ಪದ್ಮಮ್ಮ, ಟಿ.ವಿ.ಸಂಧ್ಯಾ, ಎಸ್.ಜಯಲಕ್ಷ್ಮಿ, ಮುಖಂಡರಾದ ಕುಂದೂರು ಪ್ರಕಾಶ್, ಚಂದ್ರಕುಮಾರ್, ಮುಟ್ಟನಹಳ್ಳಿ ಅಂಬರೀಶ್, ಬಂಕ್ ಮಹದೇವು, ಸಿಇಒ ಡಿ.ಶಿವಣ್ಣ, ವೆಂಕಟೇಶ್, ಇದ್ದರು.