ಸಾರಾಂಶ
ಯಲ್ಲಾಪುರ:
ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ವಿರುದ್ಧ ಘೋಷಣೆ ಕೂಗಿ, ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮುಖಂಡ ಡಿ.ಎನ್. ಗಾಂವ್ಕಾರ ಮಾತನಾಡಿ, ಸಂಸದರು ಸಭ್ಯತೆಯ ಎಲ್ಲೆ ಮೀರಿ, ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಸಂಸ್ಕೃತಿಯ ಕುರಿತು ಉಪದೇಶ ಮಾಡುವ ಇವರು, ಅದಕ್ಕೆ ತಕ್ಕಂತೆ ವರ್ತಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಅವಹೇಳನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಧಿಕಾರವಿದ್ದಾಗ ಅಭಿವೃದ್ಧಿ ಮಾಡದೇ ಕೇವಲ ವಿವಾದಾತ್ಮಕ ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ಟೀಕಿಸಿದರು.ಕಾಂಗ್ರೆಸ್ ಸೇವಾದಳದ ಸೆಲ್ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಕುಂಭಕರ್ಣನಂತೆ ಮಲಗಿದ್ದ ಸಂಸದರು ಚುನಾವಣೆ ಸಮೀಪಿಸುತ್ತಿದ್ದಂತೆ ಎದ್ದಿದ್ದಾರೆ. ಕಾರ್ಯಕರ್ತರು ಹುಲಿ ಬಂತು ಎಂದು ಅರಚುತ್ತಿದ್ದಾರೆ. ಈ ಹುಲಿಗೆ ಚುನಾವಣೆ ಸಮಯಕ್ಕೆ ತಾನಾಗಿಯೇ ಎಚ್ಚರವಾಯಿತೋ ಅಥವಾ ಚುನಾವಣೆ ಸಮಯಕ್ಕೆ ಸರಿಯಾಗಿ ತನ್ನನ್ನು ಎಬ್ಬಿಸಿ ಎಂದು ಕಾರ್ಯಕರ್ತರಿಗೆ ಹೇಳಿಯೇ ಮಲಗಿತ್ತೋ ಎಂದು ಲೇವಡಿ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬಂದಾಗಲೂ ಎದ್ದು ಬಾರದ ಸಂಸದರು ಈಗ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ಸದಸ್ಯ ದಿಲೀಪ ರೊಖಡೆ, ಪಕ್ಷದ ಮುಖಂಡರಾದ ಸರಸ್ವತಿ ಗುನಗಾ, ಅನಿಲ್ ನಾಯ್ಕ ಚಿನ್ನಾಪುರ, ಲಾರೆನ್ಸ್ ಸಿದ್ದಿ, ಕೈಸರ್ ಸೈಯದ್ ಅಲಿ, ವಿಲ್ಸನ್ ಫರ್ನಾಂಡೀಸ್, ವಿ.ಜಿ. ಭಾಗ್ವತ, ಎನ್.ಎನ್. ಹೆಬ್ಬಾರ್ ಉಪಸ್ಥಿತರಿದ್ದರು.