ಹಾನಗಲ್ಲ: ಹಾನಗಲ್ಲಿನ ನಾಲ್ಕರ ಕ್ರಾಸ್ ನಿಂದ ಸಮ್ಮಸಗಿ ಗ್ರಾಮದ ವರೆಗೆ ಸಾಗರ ಮಾಲಾ ಯೋಜನೆಯ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಾವೇರಿ - ಶಿರಸಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ಜೊತೆಗೆ ಶುಕ್ರವಾರ ಕಾಮಗಾರಿ ನಡೆಯುತ್ತಿರುವ ಹನುಮನಕೊಪ್ಪ, ಬಾಳೆಹಳ್ಳಿ, ಕತ್ರಿಕೊಪ್ಪ, ಸಮ್ಮಸಗಿ ಗ್ರಾಮಗಳಿಗೆ ತೆರಳಿ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಮ್ಮಸಗಿ ಗ್ರಾಮದಲ್ಲಿ ವಾಹನ ಸಂಚಾರವಾಗದಷ್ಟು ರಸ್ತೆ ಹಾಳಾಗಿದ್ದರಿಂದ ತಕ್ಷಣ ರಸ್ತೆ ಸಮತಟ್ಟಾಗಿ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ವಾಹನ ಸಂಚಾರದಿಂದ ಹಳ್ಳಿಗಳಲ್ಲಿ ಧೂಳು ಏಳುವುದರಿಂದ ಗ್ರಾಮೀಣ ಜನರಿಗೆ ಸಮಸ್ಯೆಯಾಗುತ್ತಿದ್ದು, ಪ್ರತಿ ದಿನ ಎರಡು ಮೂರು ಬಾರಿ ರಸ್ತೆಗೆ ನೀರು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಹೊನ್ನಾವರ ವಿಭಾಗದ ಪಿ.ಡಿ. ಎಂ.ಶಿವಕುಮಾರ, ಅಧಿಕಾರಿಗಳಾದ ವಿನಾಯಕ ಸೊಂಟಕ್ಕೆ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಮುಖಂಡರುಗಳಾದ ಕೃಷ್ಣ ಇಳಿಗೇರ, ರಾಘವೇಂದ್ರ ತಹಶಿಲ್ದಾರ ಸೇರಿದಂತೆ ಬಾಳೆಹಳ್ಳಿ, ಕಂತ್ರಿಕೊಪ್ಪ ಹಾಗೂ ಸಮ್ಮಸಗಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.