ಸಾರಾಂಶ
ಅಹವಾಲು ಸ್ವೀಕಾರ ವೇಳೆ ಕಡಬ ತಾಲೂಕಿನ ಕೋಡಿಂಬಾಳದ ರೈಲು ನಿಲ್ದಾಣ ಅಭಿವೃದ್ಧಿಪಡಿಸಿದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಮನವಿ ನೀಡಿದರು. ಸಂಬಂಧಪಟ್ಟವರ ಜತೆ ಚರ್ಚಿಸಿ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಶ್ರಮಿಸುವುದಾಗಿ ಸಂಸದ ಆಶ್ವಾಸನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸವಣೂರು, ಸುಬ್ರಹ್ಮಣ್ಯ, ನೆಲ್ಯಾಡಿ ಮತ್ತು ಕಡಬ ಪರಿಸರದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವುದಕ್ಕೆ ಜಾಗ ಗುರುತಿಸುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಡಬ ತಾಲೂಕು ತಹಸೀಲ್ದಾರ್ಗೆ ಸೂಚನೆ ನೀಡಿದ್ದಾರೆ. ಕಡಬ ತಾಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕರ ಭೇಟಿ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕುಸುಮ್ ಯೋಜನೆಯಡಿ ದೇಶದೆಲ್ಲೆಡೆ ಸೋಲಾರ್ ಪಾರ್ಕ್ಗಳನ್ನು ಸ್ಥಾಪಿಸಿ ಗ್ರೀನ್ ಎನರ್ಜಿಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಸವಣೂರು, ಸುಬ್ರಹ್ಮಣ್ಯ ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಜಾಗ ಗುರುತಿಸುವಂತೆ ಸಚಿವಾಲಯದಿಂದ ಮೆಸ್ಕಾಂಗೆ ಪತ್ರ ಬಂದಿದೆ. ಹೀಗಾಗಿ, ಒಂದು ವಾರದೊಳಗೆ ಕಡಬ ತಾಲೂಕು ವ್ಯಾಪ್ತಿಯಲ್ಲಿ ಪಿಎಂ ಕುಸುಮ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿ ಅದರ ಸಾಧಕ- ಬಾಧಕಗಳ ಬಗ್ಗೆ ವರದಿ ನೀಡುವಂತೆ ಸಂಸದರು ತಹಸೀಲ್ದಾರ್ಗೆ ಸೂಚಿಸಿದರು.ಕೋಡಿಂಬಾಳ ರೈಲು ಅಭಿವೃದ್ಧಿ ಭರವಸೆ:ಅಹವಾಲು ಸ್ವೀಕಾರ ವೇಳೆ ಕಡಬ ತಾಲೂಕಿನ ಕೋಡಿಂಬಾಳದ ರೈಲು ನಿಲ್ದಾಣ ಅಭಿವೃದ್ಧಿಪಡಿಸಿದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಮನವಿ ನೀಡಿದರು. ಸಂಬಂಧಪಟ್ಟವರ ಜತೆ ಚರ್ಚಿಸಿ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಶ್ರಮಿಸುವುದಾಗಿ ಸಂಸದ ಆಶ್ವಾಸನೆ ನೀಡಿದರು.
ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಜನರನ್ನು ಅಲೆದಾಡಿಸದಂತೆ ಇದೇ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಬಿಜೆಪಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬಿಜೆಪಿ ಪ್ರಮುಖರಾದ ಪುಲಸ್ತ್ಯ ರೈ, ಪ್ರಕಾಶ್ ಎನ್.ಕೆ., ಮಧುಸೂದನ್ ಕೊಂಬಾರು, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಸುರೇಶ್ ದೆಂತಾರು, ರಮೇಶ ಕಲ್ಪುರೆ ಮತ್ತಿತರರಿದ್ದರು.