ನನ್ನ ಬಗ್ಗೆ ಗೊಂದಲ ಮೂಡಿಸುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ

| Published : Jul 19 2024, 12:46 AM IST

ಸಾರಾಂಶ

ಮುಖ್ಯವಾಗಿ ಮೈಸೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕೆಲಸ ವೇಗವಾಗಿ ನಡೆಯಬೇಕಿದ್ದು, ಅದರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಾನು ರಾಜಕೀಯಕ್ಕೆ ಕಾಲಿಟ್ಟಾಗ ರಾಜರು ಕೈಗೆ ಸಿಗುವರೇ ಎಂದು ಕೆಲವರು ಗೊಂದಲ ಮೂಡಿಸುತ್ತಿದ್ದರು. ಆದರೆ, ಈಗ ಅದಕ್ಕೆಲ್ಲ ಉತ್ತರ ದೊರೆತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ, ಬ್ರಾಹ್ಮಣ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪಾರಂಪರಿಕ ಇತಿಹಾಸದಲ್ಲಿ ಮೈಸೂರು- ಕೊಡಗು ಕ್ಷೇತ್ರವನ್ನು ಉಳಿಸುವ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಮೈಸೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕೆಲಸ ವೇಗವಾಗಿ ನಡೆಯಬೇಕಿದ್ದು, ಅದರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಯದುವೀರ್ ಅವರು 1.39 ಲಕ್ಷ ಮತಗಳ ಅಂತರದಲ್ಲಿ ಜಯಶೀಲರಾಗಿದ್ದು, ಮೈಸೂರಿನಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ರಾಷ್ಟ್ರೀಯ ನಾಯಕರ ನಿರ್ಧಾರದ ಫಲವಾಗಿ ಈ ಜಯ ದೊರೆತಿದೆ ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಸಂಸದರಿಗೆ ನಮ್ಮ ಸಮುದಾಯದ ಯುವಕರು ಬೆಂಬಲವಾಗಿದ್ದರು. ಅನೇಕ ಮೊಹಲ್ಲಾದಲ್ಲಿ ಒಂದೊಂದು ಬ್ರಾಹ್ಮಣ ಸಂಘವಿದ್ದು, ನಮ್ಮ ಸಮುದಾಯದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಶ್ರೀ ಇಳ್ಳೆ ಆಳ್ವಾರ್ ಸ್ವಾಮೀಜಿ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ. ಲಕ್ಷ್ಮೀ, ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ. ನಿಶಾಂತ್, ಪುಷ್ಪಾ ಅಯ್ಯಂಗಾರ್, ಕೆ.ಆರ್. ಸತ್ಯನಾರಾಯಣ, ಎಂ.ಆರ್. ಬಾಲಕೃಷ್ಣ, ಹರೀಶ್, ಲತಾ ಬಾಲಕೃಷ್ಣ, ಜ್ಯೋತಿ, ನಾಗಶ್ರೀ, ಕಡಕೋಳ ಜಗದೀಶ್ ಮೊದಲಾದವರು ಇದ್ದರು.