ಉಡುಪಿ ಸಖಿ ಸೆಂಟರ್‌ಗೆ ಸಂಸದ ಕೋಟ ಭೇಟಿ

| Published : Oct 31 2024, 12:52 AM IST

ಸಾರಾಂಶ

ಸಖಿ ಸೆಂಟರ್‌ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಕೊಟ್ಟರು. ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿರುವ ಕೇಂದ್ರ ಸರ್ಕಾರದ ಸಾಮ್ಯತೆಗೆ ಒಳಪಟ್ಟ, ಸಂತ್ರಸ್ಥ ಮಹಿಳೆಯ ಆಶ್ರಯ ಕೇಂದ್ರ ಸಖಿ ಸೆಂಟರ್‌ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ಭೇಟಿ ಕೊಟ್ಟು ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸಂಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದರು.

ಉಡುಪಿ ಸಖಿ ಸೆಂಟರ್‌ಗೆ ಭೇಟಿ ಕೊಟ್ಟ ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ, ಸಖಿ ಸೆಂಟರ್‌ನ ಆಡಳಿತ ಅಧಿಕಾರಿ ಪ್ರಮೀಳಾ, ಕಾನೂನು ಸಲಹೆಗಾರರಾದ ಸ್ಮಿತಾ ಮತ್ತು ಆಂಜಲಿನೊ ಅವರು ಉಪಸ್ಥಿತರಿದ್ದರು.

ಪ್ರಮುಖವಾಗಿ ಸಖಿ ಸೆಂಟರ್‌ನಲ್ಲಿ ಸಿಗುವ ಮಹಿಳಾ ಸಂಬಂಧಿ ಸಮಸ್ಯೆಗಳ ಪರಿಹಾರೋಪಾಯದ ಬಗ್ಗೆ ಮಾಹಿತಿ ಒದಗಿಸಿದ ಅಧಿಕಾರಿಗಳು ಯಾವುದೇ ಸಮಸ್ಯೆಯಿಂದ ಸಂತ್ರಸ್ತ ಮಹಿಳೆ ಸಖಿ ಸೆಂಟರ್ ಅನ್ನು ಆಶ್ರಯಿಸಬಹುದಾಗಿದ್ದು, ಸಂತ್ರಸ್ತರಿಗೆ ತಾತ್ಕಾಲಿಕ ವಾಸ್ತವ್ಯ, ಕಾನೂನು ಪ್ರಾಧಿಕಾರದ ನೆರವು, ಚಿಕಿತ್ಸೆಗಳು ಮತ್ತು ಸಮಾಲೋಚನೆಯೂ ಸೇರಿದಂತೆ ಅವರ ಸಂಕಷ್ಟಕ್ಕೆ ಪೂರ್ಣ ನೆರವು ನೀಡಿ ಬದುಕು ಕಟ್ಟಿಕೊಳ್ಳಲು ಸಖಿ ಸೆಂಟರ್ ನೆರವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಖಿ ಸೆಂಟರ್‌ಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಹಾಗೂ ಸಖಿ ಕೇಂದ್ರದ ವಿಸ್ತರಣೆ ಬಗ್ಗೆ ಬೇಡಿಕೆ ಇಟ್ಟಿದ್ದು, ಸಂಸದರು ಬೇಡಿಕೆ ಸ್ವೀಕರಿಸಿದರು. ಸಂಸದರೊಂದಿಗೆ ನಗರಸಭಾ ಸದಸ್ಯರು ಸಂಪಾವತಿ ಮತ್ತು ಸಖಿ ಸೆಂಟರ್‌ನ ಸಿಬ್ಬಂದಿ ಹಾಜರಿದ್ದರು