ಸಾರಾಂಶ
ಗಂಗೊಳ್ಳಿಯ ಮೀನುಗಾರಿಕಾ ಬೋಟು ನಿಲುಗಡೆ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಸಂತ್ರಸ್ತರಿಗೆ ೧ ಕೋಟಿ ರು. ಪರಿಹಾರ ನೀಡಲು ಸಿಎಂಗೆ ಸಂಸದ ಬಿವೈಆರ್ರ್ ಮನವಿ
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಬೋಟು ನಿಲುಗಡೆಯ ಸ್ಥಳದಲ್ಲಿ ಸೋಮವಾರ ನಡೆದ ಆಕಸ್ಮಿಕ ಅಗ್ನಿ ದುರಂತದಲ್ಲಿ ಬೋಟುಗಳನ್ನು ಕಳೆದುಕೊಂಡ ಸಂತ್ರಸ್ತ ಮೀನುಗಾರರಿಗೆ ಸರ್ಕಾರದಿಂದ 10 ಕೋಟಿ ರೂ. ನೆರವು ನೀಡಬೇಕು ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರೊಂದಿಗೆ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿದ ಸಂಸದರು, ಅಗ್ನಿ ಅವಘಡದಲ್ಲಿ 8 ಬೋಟುಗಳು ನಾಶವಾಗಿದ್ದು, 2 ದೋಣಿಗಳಿಗೆ, 2 ಡಿಂಗಿ ಮತ್ತು ಮೀನುಗಾರಿಕೆ ಬಲೆ ಹಾನಿಯಾಗಿದೆ. ಆಕಸ್ಮಿಕ ಅವಘಡದಿಂದಾಗಿ ಮೀನುಗಾರರು ಆಘಾತಕ್ಕೊಳಗಾಗಿದ್ದಾರೆ. ಈಗಾಗಲೇ ತೂಫಾನ್, ಚಂಡಮಾರುತ ಹಾಗೂ ಇನ್ನಿತರೆ ಕಾರಣಗಳಿಂದ ಮೀನುಗಾರಿಕೆ ನಡೆಸಲಾಗದೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಮೀನುಗಾರರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದವರು ಸಿಎಂಗೆ ಮನವರಿಕೆ ಮಾಡಿದರು. ಅವರೊಂದಿಗೆ ವೇಳೆ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಇದ್ದರು.