ಎಚ್‌ಡಿಕೆ ಗುಣಮುಖರಾಗಲು ಮೃತ್ಯುಂಜಯ ಹೋಮ

| Published : Mar 22 2024, 01:01 AM IST

ಸಾರಾಂಶ

ಎಚ್‌ಡಿಕೆ ಗುಣಮುಖರಾಗಲು ಮೃತ್ಯುಂಜಯ ಹೋಮ

ಕನ್ನಡಪ್ರಭ ವಾರ್ತೆ ಮಂಡ್ಯ

ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆದಷ್ಟು ಬೇಗ ಗುಣಮುಖರಾಗಿ ಹಿಂತಿರುಗುವಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು. ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ನೇತೃತ್ವದಲ್ಲಿ ನಗರದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಮೃತ್ಯುಂಜಯ ಹೋಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಯಸ್ಸು, ಆರೋಗ್ಯ ನೀಡುವಂತೆ ಕೋರಿಕೆ ಸಲ್ಲಿಸಿದರು. ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮಾತನಾಡಿ, ಜನಮೆಚ್ಚುಗೆ ಗಳಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ಆರೋಗ್ಯವಂತರಾಗಿ ನಾಡಿಗೆ ಮರಳಬೇಕು. ಅವರ ಸೇವೆ ರಾಜ್ಯಕ್ಕೆ ಅವಶ್ಯವಿರುವುದರಿಂದ ಅವರು ಮತ್ತೊಮ್ಮೆ ಸಿಎಂ ಆಗಿ ಜನಸೇವೆ ಮಾಡುವುದಕ್ಕೆ ಅವಕಾಶ ದೊರಕಿಸಿಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಅವರ ನೇತೃತ್ವದಲ್ಲಿ ಮುಂದೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಗುಣಮುಖರಾಗುವಂತೆ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಜೆಡಿಎಸ್ ಮುಖಂಡರು-ಕಾರ್ಯಕರ್ತರು ಬುಧವಾರದಿಂದಲೇ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಎಲ್ಲರ ಪ್ರಾರ್ಥನೆಯಿಂದ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಿ ಬರಲಿದ್ದಾರೆ. ಮನ್‌ಮುಲ್ ಉಪಾಧ್ಯಕ್ಷ ವಿ.ಎಸ್.ರಘುನಂದನ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ನಾಗಮ್ಮ, ಸದಸ್ಯ ನಾಗೇಶ್, ನಾಗಪ್ಪ ಇತರರಿದ್ದರು.

ಎಚ್‌ಡಿಕೆ ಆರೋಗ್ಯ ಬೇಗ ಚೇತರಿಸಿಕೊಳ್ಳಿ: ಡಾ.ಕೆ.ಅನ್ನದಾನಿ

ಕನ್ನಡ ಪ್ರಭ ವಾರ್ತೆ ಮಳವಳ್ಳಿ ಎರಡು ಬಾರಿ ಸಿಎಂ ಆಗಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡುವ ಮೂಲಕ ಜನಸಮಾನ್ಯರ ಮನಸ್ಸಿನಲ್ಲಿ ಉಳಿದಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಬೇಗನೇ ಚೇತರಿಕೆ ಕಾಣಲಿ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಶಿಸಿದರು. ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೃದಯ ಚಿಕಿತ್ಸೆ ಯಶ್ವಸಿ ಹಾಗೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಆರೋಗ್ಯ ವೃದ್ದಿಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರು ಬೇಗ ಗುಣಮುಖರಾಗಿ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಹೇಳಿದರು.

ನಾಡಿನ ದಲಿತ ಹಾಗೂ ಬಡವರ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದರು.ಈ ವೇಳೆ ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಟೌನ್ ಘಟಕದ ಅಧ್ಯಕ್ಷ ಪ್ರಭು, ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಸಿದ್ದರಾಜು, ನಾಗೇಶ್, ನಂದಕುಮಾರ್, ಬಸವರಾಜು, ನೂರುಲ್ಲಾ, ಕುಮಾರ್, ಮುಖಂಡರಾದ ಮಲ್ಲೇಗೌಡ, ಪ್ರಭು, ಕಿಟ್ಟಿ, ಪೊತ್ತಂಡೆ ನಾಗರಾಜು, ತಳಗವಾದಿ ರಾಮಣ್ಣ, ನಾಗರಾಜು, ಅಂಕರಾಜು, ಮೆಹಬೂಬ್ ಪಾಷಾ, ಗುರು ಇದ್ದರು.