ಸಾರಾಂಶ
ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಮಾರಾಟ ಮಾಡುವುದಾಗಿ ಹೇಳಿಕೆ ನೀಡಿದ್ದಕ್ಕೆ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ವಿಷಾದ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಾಲಿ ಇರುವ ಪರಿಷತ್ ಭವನ ಕಿರಿದಾಗಿದೆ. ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಗರದ ಹೃದಯಭಾಗದಲ್ಲಿ ಹೊಸದಾಗಿ ಪರಿಷತ್ ಭವನ ನಿರ್ಮಾಣವಾದರೆ ಜನರಿಗೆ ಅನುಕೂಲವಾಗುತ್ತದೆ ಎಂಬ ಕಳಕಳಿಯಿಂದ ಆ ಮಾತನ್ನು ಹೇಳಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ ಮಾರಾಟ ಮಾಡುವುದು ನಮ್ಮ ಉದ್ದೇಶವಲ್ಲ. ನಿನ್ನೆ ಮಾತಿನ ಭರದಲ್ಲಿ ನೀಡಿದ ಹೇಳಿಕೆಗೆ ವಿಷಾದಿಸುತ್ತೇನೆ. ನಾನು ಯಾವುದೇ ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳನ್ನು ನೋಯಿಸುವ ಉದ್ದೇಶದಿಂದ ಆ ಮಾತನ್ನು ಹೇಳಿಲ್ಲ. ಜಿಲ್ಲಾ ಕಸಾಪ ಹೊಸದಾಗಿ ನಿರ್ಮಿಸುವ ಕನ್ನಡ ಭವನದ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇವೆ. ಹೊಸ ಕಟ್ಟಡ ನಿರ್ಮಾಣ ಮಾಡುವುದಾದರೆ ವೈಯಕ್ತಿಕವಾಗಿ 1 ಲಕ್ಷ ರು. ದೇಣಿಗೆ ಕೊಡುತ್ತೇನೆ ಎಂದು ತಿಳಿಸಿದರು.