ರಾ.ಹೆ. ಕೆಸರುಗದ್ದೆ: ಕಪ್ಪು ಲುಂಗಿ ಧರಿಸಿ ಏಕಾಂಗಿ ಪ್ರತಿಭಟನೆ

| Published : Jun 24 2024, 01:38 AM IST

ರಾ.ಹೆ. ಕೆಸರುಗದ್ದೆ: ಕಪ್ಪು ಲುಂಗಿ ಧರಿಸಿ ಏಕಾಂಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೆಡೆ ಹೆದ್ದಾರಿಯಲ್ಲಿ ಕೆಸರು ತುಂಬಿ ವಾಹನ‌ಸವಾರರು ಪರದಾಡುತ್ತಿದ್ದರೆ ಮತ್ತೊಂದೆಡೆ ಉಜಿರೆ ಪೇಟೆಯಲ್ಲಿ ಪೆಟ್ರೋಲ್ ಪಂಪ್‌ನಿಂದ ಬೆನಕ ಆಸ್ಪತ್ರೆಯ ವರೆಗೆ ರಸ್ತೆ ನದಿಯಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿಯಿಂದ ಮುಂಡಾಜೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು ಅಪಘಾತಗಳಿಗೆ ಕಾರಣವಾಗುತ್ತಿದೆ. ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೊಟೇಲ್‌ ಮಾಲಕ, ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಅವರು ಕಪ್ಪು ಲುಂಗಿ ಧರಿಸಿ ಏಕಾಂಗಿಯಾಗಿ ಭಾನುವಾರ ಉಜಿರೆಯಲ್ಲಿ ರಸ್ತೆಯ ಕೆಸರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅವರ ಪ್ರತಿಭಟನೆಗೆ ಸಾರ್ವಜನಿಕರು ಕೈಜೋಡಿಸಿದರು.ಮಂಗಳೂರು-ವಿಲ್ಲುಪುರಂ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಉಜಿರೆಯಿಂದ ಮುಂಡಾಜೆ ಸಾಗುವ ರಸ್ತೆ ಬೆಳ್ತಂಗಡಿಯಿಂದ ಮುಂದಕ್ಕೆ ಕಾಶಿಬೆಟ್ಟು ಸಮೀಪ, ಮಡಂತ್ಯಾರಿಂದ ಮುಂದಕ್ಕೆ ಬರುವ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಏರುಪೇರಾದರೂ ಬಿದ್ದು ಅನಾಹುತ ಸಂಭವಿಸುತ್ತಿದೆ. ಉಜಿರೆಯಲ್ಲಿ ಭಾನವಾರ ಹೆದ್ದಾರಿ ಕೆಸರುಮಯವಾದ ಪರಿಣಾಮ ಎರಡು ಮೂರು ದ್ವಿಚಕ್ರ ಸವಾರರು ಅಪಾಘಾತಕ್ಕೀಡಾಗಿದ್ದಾರೆ. ಇದನ್ನು ಗಮನಿಸಿದ ಪ್ರವೀಣ್ ಅವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಕಳೆದ ವಾರ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಬಿ.ಸಿ.ರೋಡ್‌ನಿಂದ ಚಾರ್ಮಾಡಿ ವರೆಗೆ ರಸ್ತೆ ಸಮಸ್ಯೆ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ವಾರದೊಳಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಆದರೆ ಬೇಕಾಬಿಟ್ಟಿ ಕಾಮಗಾರಿಯಿಂದ ಜಿಲ್ಲಾಧಿಕಾರಿಗಳ ಆಜ್ಞೆಗೂ ಕವಡೆ ಕಿಮ್ಮತ್ತಿಲ್ಲ ಎಂಬಂತಾಗಿದೆ. ಇದರ ಬಗ್ಗೆ ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಇಲ್ಲವೇ ನಿರಂತರ ಹೋರಾಟ ನಡೆಸುವುದಾಗಿ ಉಜಿರೆ ಹೋಟೆಲ್‌ ಮಾಲೀಕ ಪ್ರವೀಣ್ ಹಳ್ಳಿಮನೆ ಪ್ರವೀಣ್ ತಿಳಿಸಿದ್ದಾರೆ.ನದಿಯಂತಾದ ರಸ್ತೆ; ಒಂದೆಡೆ ಹೆದ್ದಾರಿಯಲ್ಲಿ ಕೆಸರು ತುಂಬಿ ವಾಹನ‌ಸವಾರರು ಪರದಾಡುತ್ತಿದ್ದರೆ ಮತ್ತೊಂದೆಡೆ ಉಜಿರೆ ಪೇಟೆಯಲ್ಲಿ ಪೆಟ್ರೋಲ್ ಪಂಪ್‌ನಿಂದ ಬೆನಕ ಆಸ್ಪತ್ರೆಯ ವರೆಗೆ ರಸ್ತೆ ನದಿಯಂತಾಗಿದೆ. ಇದು ಕಳೆದ ಎಂಟು ಹತ್ತು ವರ್ಷಗಳ ಗೋಳಾಗಿದೆ. ಗ್ರಾ.ಪಂ.ಪ್ರತಿ ವರ್ಷ ನೋಡಿಯೂ ನೋಡದಂತಿದೆ. ರಸ್ತೆಯ ನೀರು ನೇರವಾಗಿ ಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗುತ್ತಿದೆ.