ಲಕ್ಷ್ಮೇಶ್ವರ: ಪ್ರತಿವರ್ಷ ಮಳೆಗಾಲ ಬಂತೆಂದರೆ ಸಾಕು ಪಟ್ಟಣದ ಕಲಾಂ ನಗರದ ರಸ್ತೆಗಳು ಕೆಸರುಗದ್ದೆಗಳಾಗಿಬಿಡುತ್ತವೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿನ ಬಸವೇಶ್ವರ ನಗರ ಹಾಗೂ ಕಲಾಂ ನಗರ ಬಡಾವಣೆಗಳು ಕಳೆದ 25 ವರ್ಷಗಳ ಹಿಂದೆ ನೂತನ ಬಡಾವಣೆಗಳಾಗಿ ರೂಪುಗೊಂಡಿದ್ದರೂ ರಸ್ತೆ, ಚರಂಡಿ ಇಲ್ಲದೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳು ಇಲ್ಲದೆ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

3 ದಶಕ ಕಳೆದರೂ ಇಲ್ಲಿಯ ರಸ್ತೆಗಳು ಸುಧಾರಣೆಯಾಗಿಲ್ಲ. ಮಳೆ ಬಂದರೆ ಇಲ್ಲಿಯ ನಿವಾಸಿಗಳು ಜೀವ ಭಯದಿಂದ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕೆಸರು ಗದ್ದೆಯಲ್ಲಿ ವೃದ್ಧರು, ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ ಎನ್ನುತ್ತಾರೆ ನಿವಾಸಿಗಳು.

ಈ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ವಸತಿನಿಲಯ ಹಾಗೂ ಕಲಾಂ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ದಿನಂಪ್ರತಿ ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಕಲಾಂ ಶಾಲೆ ಅಧ್ಯಕ್ಷ ರಿಯಾಜ್ ಅಹ್ಮದ್ ಗದಗ.

ಈ ಕುರಿತು ಪುರಸಭೆಯ ಸದಸ್ಯರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದರೂ ಗಮನ ಹರಿಸಿಲ್ಲ. ಮುಂಗಾರು ಮಳೆ ಪ್ರಾರಂಭವಾಗುವ ಮೊದಲು ಪುರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಗಳಿಗೆ ಗೊರಸು ಮಣ್ಣು ಹಾಕಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಕಲಾಂ ನಗರದ ನಿವಾಸಿಗಳ ಆಗ್ರಹವಾಗಿದೆ. 14ರಂದು ಜಾನಪದ ಗೀತೋತ್ಸವ


ಗದಗ: ಅಖಿಲ ಕರ್ನಾಟಕ ಕಬ್ಬಿಗರ ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಗೀತೋತ್ಸವ ಹಾಗೂ ಕಬ್ಬಿಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ. 14ರಂದು ಬೆಳಗ್ಗೆ 11ಕ್ಕೆ ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ. ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಕಲಾವಿದರು ಹಾಗೂ ನಾಗಲಿಂಗೇಶ್ವರ ಭಜನಾ ಸಂಘ ಬೆಟಗೇರಿ ಕಲಾವಿದರು ಜನಪದ ಗೀತೆ, ಭಜನಾ ಹಾಡುಗಳನ್ನು ಸಾದರಪಡಿಸುವರು.5 ಜನ ಸಾಧಕರಿಗೆ ಪ್ರತಿಷ್ಠಿತ ಕಬ್ಬಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ. ರಾಜಶೇಖರ ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಸಾಹಿತಿ ಗು.ರು. ಕಲ್ಮಠ, ಸಾಹಿತಿ ಬಸವರಾಜ ಗಣಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಅಧ್ಯಕ್ಷತೆ ವಹಿಸುವರು. ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಜಾನಪದ ಗೀತೆ ಹಾಗೂ ಭಜನೆ ಹಾಡುಗಳ ಮಹತ್ವ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.