ಸಾರಾಂಶ
ಜಿಲ್ಲಾ ಕೇಂದ್ರ ಚಾಮರಾಜನಗರದ ಗ್ರಾಮ ದೇವತೆ ಮುದುಕ ಮಾರಮ್ಮನ ಹಬ್ಬಕ್ಕೆ ಮಂಗಳವಾರ ಬೆಳಗ್ಗೆ ನಡೆದ ಶ್ರದ್ಧಾ ಭಕ್ತಿಯ ಮೆರವಣಿಯೊಂದಿಗೆ ತೆರೆ ಬಿದ್ದಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಕೇಂದ್ರ ಚಾಮರಾಜನಗರದ ಗ್ರಾಮ ದೇವತೆ ಮುದುಕ ಮಾರಮ್ಮನ ಹಬ್ಬಕ್ಕೆ ಮಂಗಳವಾರ ಬೆಳಗ್ಗೆ ನಡೆದ ಶ್ರದ್ಧಾ ಭಕ್ತಿಯ ಮೆರವಣಿಯೊಂದಿಗೆ ತೆರೆ ಬಿದ್ದಿತು. ಸೋಮವಾರ ಬೆಳಗ್ಗೆಯಿಂದಲೇ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮಾರಮ್ಮನ ದೇವಸ್ಥಾದಲ್ಲಿ ಮಾರಮ್ಮನಿಗೆ ವಿಶೇಷ ಪೂಜೆ, ಹೋಮ ಹವನಗಳು ಪ್ರಾರಂಭವಾಗಿ ನಡು ರಾತ್ರಿಯವರೆಗೂ ನಡೆದವು. ಸಂಜೆ ಪ್ರಾರಂಭವಾದ ತಂಪಿನ ಪೂಜೆಯನ್ನು ಮಹಿಯರು ತಂಡೋಪ ತಂಡವಾಗಿ ಬಂದು ನೆರವೇರಿಸಿದರು. ಬೇರೆ ಗ್ರಾಮಗಳಿಂದ ಆಗಮಿಸಿದ ಸತ್ತಿಗೆ, ಸೂರಪಾನಿಗಳನ್ನು ಪೂಜೆ ನೀಡಿ ಸ್ವಾಗತಿಸಲಾಯಿತು.ರಾತ್ರಿ ದೇವಸ್ಥಾನದ ಆವರಣದಲ್ಲಿ ಕಲ್ಲು ಅಥವಾ ಇಟ್ಟಿಗೆ ಹೊಲೆ ಒಡ್ಡಿ ಭಕ್ತರು ಮಡೆ ಮಾಡಿ ಇಡಿ ರಾತ್ರಿ ಜಾಗರಣೆ ಇದ್ದರು. ಯುವಕರು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮಂಗಳವಾರ ಬೆಳಗಿನ ಜಾವ ದೊಡ್ಡ ರಸಿನ ಕೊಳಕ್ಕೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಪೂಜೆ ನೆರವೇರಿಸಿ, ತಲೆ ಮೇಲೆ ಕೇಲು ಹೊತ್ತ ಬಾಲಕಿಯರು ಸತ್ತಿಗೆ, ಸೂರಪಾನಿ ಸಹಿತ ಶ್ರದ್ಧಾ ಭಕ್ತಿಯಿಂದ ತಂಪಿನ ಪೂಜೆ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆ ದೇವಸ್ಥಾನದ ಆವರಣ ತಲುಪಿದ್ದಂತೆಯೇ ಭಕ್ತರು ಜಯಘೋಷ ಹಾಕಿದರು. ಕೋಳಿ ಬಲಿಯೊಂದಿಗೆ ವಿಶೇಷ ಪೂಜೆ ನಡೆದು ಮಹಾಮಂಗಳಾರತಿ ನಡೆಯುತ್ತಿದ್ದಂತೆಯೇ, ಭಕ್ತರು ತಲೆ ಮೇಲೆ ಮಡೆ ಪಾತ್ರೆ ಹೊತ್ತು ತಮ್ಮ ತಮ್ಮ ಮನೆಗಳಿಗೆ ತೆರಳಿ, ಮನೆಗಳಿಗೆ ನೆಂಟರಿಷ್ಟರಿಗೆ ವಿಶೇಷ ಭೋಜನ ಮಾಡಿ ಬಡಿಸಿ, ಸಂಭ್ರಮಿಸಿದರು. ಕಳೆದ ವರ್ಷ ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಲಾಗಿತ್ತು .ಹಬ್ಬದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.