ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ, ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಯಂತ್ರದ ಅಗತ್ಯ, ಕೃಷಿ ಹಾನಿಗೆ ಪರಿಹಾರ ಮತ್ತಿತರ ವಿಷಯಗಳ ಕುರಿತು ನ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ವ ಚರ್ಚೆ ಕಂಡುಬಂತು.ನ.ಪಂ. ಸಮುದಾಯ ಭವನದಲ್ಲಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂಲ್ಕಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲವೆಂದು ಹಲವು ಸದಸ್ಯರು ಆಕ್ಷೇಪಿಸಿದರು.ಸಭೆಗೆ ಪೌರ ಕಾರ್ಮಿಕ ರನ್ನು ಕರೆಸಿ ಸ್ಪಷ್ಟಿಕರಣ ಕೇಳಲಾಯಿತು. ಕಸ ಸಂಗ್ರಹಣೆ ವೇಳೆ ಕೆಲವೊಂದು ಕಡೆ ಹಸಿ-ಒಣ ಕಸ ವಿಂಗಡಿಸದೆ ನೀಡುತ್ತಿರುವ ಬಗ್ಗೆ ತಿಳಿಸಿದರು. ಈ ಬಗ್ಗೆ ಮುಂದೆ ಪ್ರತ್ಯೇಕವಾಗಿ ನೀಡದ ಕಸ ಪಡೆಯದಿರಲು ಪೌರ ಕಾರ್ಮಿಕರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಾಧಿಕಾರಿ ಮಧುಕರ್ ಕೆ. ಸೂಚನೆ ನೀಡಿದರು.ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 4 ಡಯಾಲಿಸಿಸ್ ಯಂತ್ರಗಳ ಮೂಲಕ ಸೇವೆ ಆರಂಭಗೊಂಡಿದೆ. ಶೆಡ್ಯೂಲ್ ಬಿಟ್ಟು ತೀವ್ರ ಸಮಸ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಈ ರೀತಿ ಚಿಕಿತ್ಸೆ ದೊರೆಯದೆ ರೋಗಿಯೊಬ್ಬರು ಮೃತಪಟ್ಟಿದ್ದು ಆದ್ಯತೆ ಮೇರೆಗೆ ಪ್ರತ್ಯೇಕ ಯಂತ್ರ ಕಾದಿರಿಸುವಂತೆ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್ ಆಗ್ರಹಿಸಿದರು.ಕೇವಲ 4 ಯಂತ್ರಗಳ ಮೂಲಕ ಕನಿಷ್ಠ 28 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಲ್ಕಿ ತಾಲೂಕು ಹೊರತುಪಡಿಸಿ ಹಲವಾರು ರೋಗಿಗಳೂ ಚಿಕಿತ್ಸೆ ಪಡೆಯುತ್ತಿದ್ದು, ಶೆಡ್ಯೂಲ್ ತಪ್ಪಿಸಲು ಅಸಾಧ್ಯ ಎಂದು ವೈದ್ಯಾಧಿಕಾರಿ ಡಾ.ಕೃಷ್ಣ ತಿಳಿಸಿದರು. ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ, ಪೊಲೀಸ್, ಅರಣ್ಯ ಸಹಿತ ನಾನಾ ಇಲಾಖಾಧಿಕಾರಿ ಗಳ ಗೈರು ಬಗ್ಗೆ ಸದಸ್ಯರಾದ ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ್, ಬಾಲಚಂದ್ರ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು.ಪಡುಬೈಲು, ಚಿತ್ರಾಪು ಪರಿಸರದಲ್ಲಿ ಉಪ್ಪು ನೀರು ಒಳಗೆ ನುಗ್ಗಿ ಕೃಷಿ ಭೂಮಿಗೆ ಹಾನಿಯಾಗಿದ್ದು ಪರಿಹಾರ ನೀಡಬೇಕೆಂದು ಸದಸ್ಯ ಯೋಗೀಶ್ ಕೋಟ್ಯಾನ್, ರಾಧಿಕಾ ಕೋಟ್ಯಾನ್ ಒತ್ತಾಯಿಸಿದರು.
ಮುಖ್ಯಾಧಿಕಾರಿ ಮಧುಕರ್ ಕೆ. ಕಾರ್ಯ ಕಲಾಪ ನಡೆಸಿಕೊಟ್ಟರು. ನಗರ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಮತ್ತು ಸದಸ್ಯರು ಇದ್ದರು.