ಪುರಸಭೆ ವ್ಯಾಪ್ತಿ ಅಧಿಕೃತ, ಅನಧಿಕೃ ಆಸ್ತಿಗಳು ತೆರಿಗೆ ವ್ಯಾಪ್ತಿಗೆ: ಸತೀಶ್ ಕುಮಾರ್

| Published : Feb 13 2025, 12:48 AM IST

ಸಾರಾಂಶ

ಪಾಂಡವಪುರ ಪಟ್ಟಣ ವ್ಯಾಪ್ತಿ ಸಾಕಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇದರಿಂದ ಸರ್ಕಾರದ ನಿರ್ದೇಶನದಂತೆ ತೆರಿಗೆ ವಸೂಲಿ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ತಮ್ಮ ಆಸ್ತಿಗಳ ದಾಖಲೆಯನ್ನು ಪುರಸಭೆ ಅಧಿಕಾರಿಗಳಿಗೆ ನೀಡಿ ಆಸ್ತಿ ಕಣಜದಲ್ಲಿ ನೋಂದಾಯಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರದ ಆದೇಶದಂತೆ ಪುರಸಭೆ ವ್ಯಾಪ್ತಿ ಬರುವ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪುರಸಭೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿ, ಪಟ್ಟಣ ವ್ಯಾಪ್ತಿ ಸಾಕಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇದರಿಂದ ಸರ್ಕಾರದ ನಿರ್ದೇಶನದಂತೆ ತೆರಿಗೆ ವಸೂಲಿ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ತಮ್ಮ ಆಸ್ತಿಗಳ ದಾಖಲೆಯನ್ನು ಪುರಸಭೆ ಅಧಿಕಾರಿಗಳಿಗೆ ನೀಡಿ ಆಸ್ತಿ ಕಣಜದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ಸಾರ್ವಜನಿಕರು ನೀಡಿದ ಆಸ್ತಿಗಳ ವಿವರಗಳನ್ನು ಕ್ರೋಢೀಕರಿಸಿ ಸರ್ಕಾರ ಸುತ್ತೋಲೆಯಂತೆ ತೆರಿಗೆ ನಿರ್ಧರಿಸಿ ವಸೂಲಿ ಮಾಡಲಾಗುವುದು. ಇದಕ್ಕೆ ಪಟ್ಟಣದ ನಾಗರೀಕರು ಸಹಕರಿಸಬೇಕು ಎಂದರು.

ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ಮುಂದಿನ ಮೂರು ತಿಂಗಳ ಒಳಗೆ ಶೇ.100 ರಷ್ಟು ಆಸ್ತಿ ತೆರಿಗೆ ವಸೂಲಾತಿ ಕ್ರಮ ಕೈಗೊಳುವುದಕ್ಕಾಗಿ ಪ್ರತಿ ತಿಂಗಳ ಗುರಿಯನ್ನು ನೀಡಿದೆ. ಅದಕ್ಕಾಗಿ ಕಚೇರಿ ಅಧೀನ ಸಿಬ್ಬಂದಿಗೆ ಗುರಿ ನಿಗದಿಪಡಿಸಿ ಕ್ರಮವಹಿಸಲು ನಿರ್ದೇಶನ ಮಾಡಿದೆ ಎಂದರು.

ಈ ಸಂಬಂಧ 15 ದಿನಗಳಿಗೊಮ್ಮೆ ಪೌರಾಡಳಿತ ನಿರ್ದೇಶನಾಲಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ ವರದಿ ಪಡೆದುಕೊಳ್ಳುತ್ತಾರೆ. ಪ್ರಗತಿ ಸಾಧಿಸಿದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ನಿಯಮಾನುಸಾರ ಕ್ರಮದ ಬಗೆಯೂ ತಿಳಿಸಲಾಗಿದೆ ಎಂದರು.

ಒಂದು ವೇಳೆ ಸರ್ಕಾರದ ನಿರ್ದೇಶನದಂತೆ ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸದಿದ್ದರೆ 15ನೇ ಹಣಕಾಸು ಆಯೋಗದ ಅನುದಾನ ಪಡೆಯುವಲ್ಲಿ ಪುರಸಭೆ ವಿಫಲವಾಗುತ್ತದೆ. ಸರ್ಕಾರದ ಎಲ್ಲಾ ಮಾನದಂಡ ಪೂರೈಸಬೇಕಿದೆ. ಇದಕ್ಕಾಗಿ ಪುರಸಭೆ ಎಲ್ಲಾ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗೆ ತರಬೇತಿ ನೀಡಿ ತೆರಿಗೆ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಈ ವೇಳೆ ಪುರಸಭೆ ಎಂಜಿನಿಯರ್ ಚೌಡಪ್ಪ, ಅಧಿಕಾರಿಗಳಾದ ನಾಗೇಶ್, ನಾರಾಯಣಪ್ಪ, ಕೃಷ್ಣ, ಲಕ್ಷ್ಮೀನಾರಾಯಣ, ಮಂಜುಳಾ, ಪುಷ್ಪಾ ಇತರರು ಇದ್ದರು.