ನಗರಸಭೆ ಮಳಿಗೆ ಒಳ ಬಾಡಿಗೆ ನೀಡಬಾರದು: ಸುಜಾತಾ

| Published : May 07 2025, 12:52 AM IST

ಸಾರಾಂಶ

ಚಿಕ್ಕಮಗಳೂರು, ಹರಾಜಿನಲ್ಲಿ ಪಡೆದಿರುವ ನಗರಸಭೆ ಮಳಿಗೆಗಳನ್ನು ಸ್ವಂತಕ್ಕೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಒಳ ಬಾಡಿಗೆ ನೀಡಬಾರದು ಎಂದು ನಗರ ಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಸೂಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹರಾಜಿನಲ್ಲಿ ಪಡೆದಿರುವ ನಗರಸಭೆ ಮಳಿಗೆಗಳನ್ನು ಸ್ವಂತಕ್ಕೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಒಳ ಬಾಡಿಗೆ ನೀಡಬಾರದು ಎಂದು ನಗರ ಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನ ಬಳಿ ಹೊಸದಾಗಿ ನಿರ್ಮಿಸಿರುವ ಮಳಿಗೆಗಳು, ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆ ಹಾಗೂ ಕೆ.ಎಂ. ರಸ್ತೆಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು.

ಇಂದು ಹರಾಜಿನಲ್ಲಿ ಪಡೆದುಕೊಂಡಿರುವುದನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಹರಾಜು ಮಾಡಲಾಗುವುದು. ಮೇ 7 ರಂದು ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್‌ ಕೋರ್ಟ್‌ನ ಆಹಾರ ಮಳಿಗೆಗಳನ್ನು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದು ಎಂದರು.

ಹಾಲಿ 48 ಜನ ಬೀದಿ ಬದಿ ವ್ಯಾಪಾರಿಗಳ ಪಟ್ಟಿ ಮಾಡಲಾಗಿದ್ದು, ಅವರು ಹರಾಜಿನಲ್ಲಿ ಭಾಗವಹಿಸದಿದ್ದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ, ಪೌರಾಯುಕ್ತರೊಂದಿಗೆ ಸಭೆ ನಡೆಸಿ ಚರ್ಚಿಸಿ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಮಳಿಗೆಗಳ ಬಾಡಿಗೆ ಸರಿಯಾಗಿ ಪಾವತಿಸದೇ ಇರುವವರು ನಗರಸಭೆಗೆ ಮುಂಗಡವಾಗಿ ಪಾವತಿಸಿರುವ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದ್ದು, ಅಂತಹವರ ಮಳಿಗೆಯನ್ನು ಮರು ಹರಾಜು ಮಾಡಿ ಅರ್ಹರಿಗೆ ಕೊಡುತ್ತೇವೆ ಎಂದು ತಿಳಿಸಿದರು.

ಪೌರಾಯುಕ್ತ ಬಿ.ಸಿ.ಬಸವರಾಜ್‌ ಮಾತನಾಡಿ, ವಿವಿಧ ಬಡಾವಣೆಗಳ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಇಂದು ನಡೆಸ ಲಾಗಿದ್ದು, ಕೆ.ಎಂ.ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಬಳಿ ನಿರ್ಮಿಸಿರುವ 32 ಮಳಿಗೆಗಳ ಪೈಕಿ 3 ಮಳಿಗೆಗಳು ಮಾತ್ರ ಹರಾಜಿನಲ್ಲಿ ತೆಗೆದುಕೊಂಡಿದೆ. ಇನ್ನೂ 29 ಮಳಿಗೆಗಳು ಇವೆ. ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ ಎಂದರು.

ಫುಡ್‌ಕೋರ್ಟ್‌ನಲ್ಲಿ ಮಳಿಗೆ ಪಡೆದವರು ಒಳ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ನಗರಸಭೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.

6 ಕೆಸಿಕೆಎಂ 2

ಚಿಕ್ಕಮಗಳೂರು ನಗರಸಭೆಯಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌, ಪೌರಾಯುಕ್ತ ಬಿ.ಸಿ. ಬಸವರಾಜು ಇದ್ದರು.