ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಸ್ವಚ್ಛತೆ ಕಾಪಾಡುವ ಹೊಣೆಗಾರಿಕೆಯನ್ನು ಪ್ರತಿನಿತ್ಯ ಬೆಳಗಿನ ಜಾವದಿಂದಲೇ ನಿಭಾಯಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಕಚೇರಿ ಸಿಬ್ಬಂದಿಗಾಗಿ ನಗರಸಭೆ ವತಿಯಿಂದ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಯಿತು.ಶಿಬಿರವನ್ನು ಉದ್ಘಾಟಿಸಿದ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ನಗರದ ಸ್ವಚ್ಛತೆಗೆ ಅಡಿಪಾಯವಾಗಿರುವ ಪೌರ ಕಾರ್ಮಿಕರ ಆರೋಗ್ಯ ಅತ್ಯಂತ ಮುಖ್ಯ. ತೀವ್ರ ದೈಹಿಕ ಪರಿಶ್ರಮದ ಕೆಲಸ ಮಾಡುತ್ತಿರುವ ಇವರ ಯೋಗಕ್ಷೇಮದ ಬಗ್ಗೆ ನಗರಸಭೆ ನಿತ್ಯ ಕಾಳಜಿ ವಹಿಸುತ್ತದೆ. ವರ್ಷಕ್ಕೊಮ್ಮೆ ಪರಿಣಿತ ವೈದ್ಯರ ತಂಡದೊಂದಿಗೆ ಸಮಗ್ರ ಆರೋಗ್ಯ ತಪಾಸಣೆ ನಡೆಸುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.ಶಿಬಿರದಲ್ಲಿ ಬೆಂಗಳೂರಿನ ದಿ ಹೆಲ್ತ್ ಮಿಷನ್ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ ವಿವಿಧ ತಪಾಸಣೆಗಳನ್ನು ನಡೆಸಿದರು. ಇದರಲ್ಲಿ ಹೃದಯ ಮತ್ತು ರಕ್ತದ ಒತ್ತಡ ತಪಾಸಣೆ,ಸಕ್ಕರೆ ಮತ್ತು ಸಾಮಾನ್ಯ ರಕ್ತ ಪರೀಕ್ಷೆಗಳು,ಕಣ್ಣಿನ ಮತ್ತು ದಂತ ಪರೀಕ್ಷೆ,ಇ.ಸಿ.ಜಿ,ದೇಹದ ಆಂತರಿಕ ಸಮಸ್ಯೆಗೆ ಸಂಬಂಧಿಸಿದ ತಜ್ಞರ ಸಲಹೆ ಇತ್ಯಾದಿಗಳನ್ನು ಒಳಗೊಂಡಿದ್ದವು. ಪ್ರಸ್ತುತ ಯುಗದಲ್ಲಿ ದೈಹಿಕ ಮಾನಸಿಕ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಶಿಬಿರಗಳು ನೌಕರರಿಗೆ ದೊಡ್ಡ ನೆರವಾಗುತ್ತವೆ. ಪೌರ ಕಾರ್ಮಿಕರ ಸೇವೆಗೆ ಗೌರವ ಸೂಚಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಆಯೋಜಿಸಲಾಗುತ್ತದೆ, ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್, ಕಚೇರಿ ವ್ಯವಸ್ಥಾಪಕಿ ಕಲಾವತಿ, ಹಿರಿಯ ಆರೋಗ್ಯ ನಿರೀಕ್ಷಕರು ಲಿಂಗರಾಜು ಮತ್ತು ರೇವಣ್ಣ ಸಿದ್ದಪ್ಪ, ವೈದ್ಯಾಧಿಕಾರಿಗಳು, ತಜ್ಞ ವೈದ್ಯರ ತಂಡ, ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.