ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ. ಉಳಿದ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸುವಂತೆ ಶಾಸಕ ಎಚ್.ಟಿ.ಮಂಜು ಮನವಿ ತಿಳಿಸಿದರು.ಪಟ್ಟಣದ ಪುರಸಭಾ ವ್ಯಾಪ್ತಿಯ 8, 14 ಮತ್ತು 16ನೇ ವಾರ್ಡುಗಳಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿಗೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ನಗರೋತ್ತಾನ ಯೋಜನೆಯಡಿಯಲ್ಲಿ 1.8 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಪಟ್ಟಣ ಪುರಸಭೆಯಲ್ಲಿಯೂ ಕಾಂಗ್ರೆಸ್ ಆಡಳಿವಿದೆ. ನಾನು ಕ್ಷೇತ್ರದ ಶಾಸಕನಾಗಿದ್ದರೂ ಪಟ್ಟಣದ ಅಭಿವೃದ್ಧಿಯ ದೃಷ್ಠಿಯಿಂದ ನಿಮ್ಮ ಹಿಂದೆ ಬರುತ್ತೇನೆ. ಎಲ್ಲರೂ ಒಗ್ಗೂಡಿ ಅಭಿವೃದ್ಧಿಗೆ ಅಗತ್ಯವಾದ ಅನುದಾನ ತರೋಣ ಎಂದು ಸದಸ್ಯರಿಗೆ ಮುಕ್ತ ಮನವಿ ಮಾಡಿದರು.ಸದಸ್ಯರು ತಮ್ಮ ವಾರ್ಡುಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಯ ಪರಿಸೀಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಹೇಮಾವತಿ ಬಡಾವಣೆ ಉಳಿಕೆ 582 ನಿವೇಶನಗಳ ಅಕ್ರಮ ಸಕ್ರಮಾತಿ ಸಂಬಂಧ ನಾನು ಈಗಾಗಲೇ ಹಲವರು ಬಾರಿ ರಾಜ್ಯ ಪೌರಾಡಳಿತ ಸಚಿವ ರಹೀಂಖಾನ್, ಜಿಲ್ಲಾ ಮಂತ್ರಿ ಚಲುವರಾಯಸ್ವಾಮಿಅವರೊಂದಿಗೆ ಚರ್ಚಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಮಸ್ಯೆ ಪರಿಹರಿಸುತ್ತೇವೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಪುರಸಭೆ ಕಾರ್ಯಾಲಯ ಸದ್ಯಕ್ಕೆ ತಾತ್ಕಾಲಿಕವಾಗಿ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಸಭೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ವಹಿಸಬೇಕು. ಟಿ.ಬಿ.ಬಡಾವಣೆಯಲ್ಲಿ ಕಡು ಬಡವರಿಗೆ ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು ಎಂದು ಕೋರಿದರು.ಈ ವೇಳೆ ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯರಾದ ಇಂದ್ರಣಿ ವಿಶ್ವನಾಥ್, ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್, ತಾಪಂ ಮಾಜಿ ಅಧ್ಯಕ್ಷ ಜಯರಂಗ, ಪುರಸಭೆ ಇಜಿನಿಯರ್ ಬಸವೇಗೌಡ, ಗುತಿಗೆದಾರ ವೆಂಕಟೇಗೌಡ ಸೇರಿದಂತೆ ಹಲವರಿದ್ದರು.