ಕಚೇರಿಗೆ ಬೀಗ ಜಡಿದ ಪೌರ ಕಾರ್ಮಿಕರು

| Published : May 28 2025, 12:42 AM IST

ಸಾರಾಂಶ

ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕ ಮತ್ತು ನೀರು ಸರಬರಾಜು ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆಪೌರ ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕ ಮತ್ತು ನೀರು ಸರಬರಾಜು ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್‌ ಮತ್ತು ಪ.ಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಇಲ್ಲಿನ ಪ.ಪಂ ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ದಿನನಿತ್ಯ ಕೆಲಸವನ್ನು ಸ್ಥಗಿತಗೊಳಿಸಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ (ಮೇ.೨೭)ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಪ.ಪಂ ಅಧಿಕಾರಿ ವರ್ಗ ಕಚೇರಿಗೆ ಬೀಗ ಹಾಕಿ ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಪಪಂ ಪೌರ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹ ಮಾತನಾಡಿ, ರಾಜ್ಯಾದ್ಯಂತ ಪೌರ ಕಾರ್ಮಿಕರು ತಮ್ಮ ಹಕ್ಕಿಗಾಗಿ ಮುಷ್ಕರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷರ ಕರೆಗೆ ಎಲ್ಲಾ ಪೌರ ನೌಕರರು ತಮ್ಮ ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಕೈ ಜೋಡಿಸಿದ್ದಾರೆ. ೩೦ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರಿಗೆ ಸಮಾನ ವೇತನ, ನಿವೃತ್ತಿ ವೇತನ, ಮರಣಕ್ಕೆ ಪರಿಹಾರ ನೀಡಿಲ್ಲಾ, ಕಸ ಸಂಗ್ರಹಣೆಯ ವಾಹನ ಡ್ರೈವರ್, ಕ್ಲೀನರ್‌ಗಳಿಗೆ ಸರ್ಕಾರ ಯಾವುದೇ ಸೇವಾ ಭದ್ರತೆ ಓದಗಿಸದೆ ಮಲತಾಯಿ ದೋರಣೆ ಮಾಡುತ್ತಿದೆ ಎಂದು ಆರೋಪ ಮಾಡಿದರು.ಕಂಪ್ಯೂಟರ್ ಆಪರೇಟರ್ ವನಿತಾ ಮಾತನಾಡಿ, ಖಾಯಂ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ರಾಜ್ಯ ಸರ್ಕಾರ ಪೌರ ನೌಕರರಿಗೂ ಓದಗಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಪೌರ ನೌಕರರು ಕಾರ್ಯನಿರ್ವಹಿಸುತ್ತಿದ್ದು ೩-೪ತಿಂಗಳಿಗೊಮ್ಮೆ ನೌಕರರಿಗೆ ವೇತನ ಸಿಗುತ್ತಿದೆ. ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸುವ ತನಕ ಮುಷ್ಕರ ಕೈ ಬಿಡುವುದಿಲ್ಲ ಎಂದು ಹೇಳಿದರು.ಈ ವೇಳೆ ಪೌರ ನೌಕರರ ಸಂಘದ ಉಪಾಧ್ಯಕ್ಷ ಮುನಿಗೋಪಾಲ್, ಖಚಾಂಚಿ ನಾಗರತ್ನಮ್ಮ, ವೇಣುಗೋಪಾಲ್, ಶೈಲೇಂದ್ರ, ಹುಸೇನ್, ರೇಣುಕಾ, ಸಾವಿತ್ರಮ್ಮ, ಗಜಲಕ್ಷ್ಮೀ, ಹರೀಶ್, ನಾಗೇಶ್, ಡ್ರೈವರ್, ಮಂಜುನಾಥ್, ಜಯಮ್ಮ ಚೆನ್ನಪ್ಪ, ನಂದ, ನೀರು ಸರಬರಾಜು ನೌಕರ ರಾಮಕೃಷ್ಣ, ವೇಣು, ಭೀಮರಾಜು, ಲಿಂಗರಾಜು, ತಿಮ್ಮರಾಜು, ದೇವರಾಜ್, ಇಮ್ರಾನ್ ಸೇರಿದಂತೆ ಇತರರು ಇದ್ದರು.