ಕರಾವಳಿ ಭಾಗದ ಸಂಗೀತಾಸಕ್ತರಿಗೆ ವಿನೂತನ ಹಾಗೂ ಉನ್ನತ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಸಂಗೀತ ಭಾರತಿ ಫೌಂಡೇಶನ್ (ರಿ.) ಮಂಗಳೂರು, 2026–2027ನೇ ಸಾಲಿನ ತನ್ನ ಸಂಗೀತ ಕಾರ್ಯಕ್ರಮಗಳ ಸರಣಿ ಸಾದರಪಡಿಸಿದೆ. ಭಾರತೀಯ ಸಂಗೀತದ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೇಶದ ವಿವಿಧ ಭಾಗಗಳ ಖ್ಯಾತ ಕಲಾವಿದರು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮದ ಉದ್ದೇಶವಾಗಿದೆ.

ಮಂಗಳೂರು: ಕರಾವಳಿ ಭಾಗದ ಸಂಗೀತಾಸಕ್ತರಿಗೆ ವಿನೂತನ ಹಾಗೂ ಉನ್ನತ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಸಂಗೀತ ಭಾರತಿ ಫೌಂಡೇಶನ್ (ರಿ.) ಮಂಗಳೂರು, 2026–2027ನೇ ಸಾಲಿನ ತನ್ನ ಸಂಗೀತ ಕಾರ್ಯಕ್ರಮಗಳ ಸರಣಿ ಸಾದರಪಡಿಸಿದೆ. ಭಾರತೀಯ ಸಂಗೀತದ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೇಶದ ವಿವಿಧ ಭಾಗಗಳ ಖ್ಯಾತ ಕಲಾವಿದರು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮದ ಉದ್ದೇಶವಾಗಿದೆ.

ಆ. 23ರಂದು ಬೆಂಗಳೂರಲ್ಲಿ:

ಆ.23 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ‘ಅನುಬಂಧ’ ಎಂಬ ಜುಗಲ್ಬಂದಿ ಗಾಯನ ಮತ್ತು ಸಿತಾರ್ ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದೆ. ಜುಗಲ್ಬಂದಿ ಗಾಯನ ಕಾರ್ಯಕ್ರಮವನ್ನು ನವದೆಹಲಿಯ ಕಶ್ಯಪ್ ಬಂಧು ಅವರಿಂದ ನಡೆಯಲಿದೆ. ಇವರಿಗೆ ಬೆಂಗಳೂರಿನ ಪಂ. ರವೀಂದ್ರ ಕಟೋಟಿ ಹಾರ್ಮೋನಿಯಂ, ಯಶವಂತ ವೈಷ್ಣವ್ (ಮುಂಬೈ) ತಬ್ಲಾ ಸಾಥ್ ನೀಡಲಿದ್ದಾರೆ. ನಂತರ ಸಿತಾರ್ ಜುಗಲ್ಬಂದಿ ಕಾರ್ಯಕ್ರಮ ಮಂಗಳೂರಿನ ಉಸ್ತಾದ್ ರಫೀಕ್ ಖಾನ್ ಮತ್ತು ಮಂಗಳೂರಿನ ಅಂಕುಶ್ ಎನ್. ನಾಯಕ್ ಇವರಿಂದ ನಡೆಯಲಿದೆ. ಇವರಿಗೆ ಮುಂಬೈ ಪಂ. ಯೋಗೇಶ್ ಸಾಮ್ಸಿ ಮತ್ತು ಮುಂಬೈ ಯಶವಂತ ವೈಷ್ಣವ್ ಸಾಥ್ ನೀಡಲಿದ್ದಾರೆ.

ಮಂಗಳೂರು ಪುರಭವನದಲ್ಲಿ ಸೆ.27 ರಂದು ಸಂಜೆ 5.30ಕ್ಕೆ ‘ಸ್ವರ ತರಂಗ’ ಎಂಬ ಕಾರ್ಯಕ್ರಮ ನಡೆಯಲಿದೆ. ಗಾಯನ ಕಾರ್ಯಕ್ರಮವನ್ನು ಕೋಲ್ಕೊತ್ತಾದ ವಿದುಷಿ ರುಚಿರಾ ಪಾಂಡಾ ನಡೆಸಿಕೊಡಲಿದ್ದಾರೆ. ಇವರಿಗೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ. ಬಳಿಕ ಸಂತೂರ್ ಕಾರ್ಯಕ್ರಮವನ್ನು ನವದೆಹಲಿಯ ಅಭಯ್ ಸೋಪೋರಿ ಅವರು ನಡೆಸಿಕೊಡಲಿದ್ದಾರೆ. ತಬಲಾದಲ್ಲಿ ನವದೆಹಲಿಯ ಉಸ್ತಾದ್ ಅಕ್ರಮ್ ಖಾನ್ ಸಾಥ್ ನೀಡಲಿದ್ದಾರೆ.

ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನ.15 ರಂದು ಸಂಜೆ 5.30ಕ್ಕೆ ‘ಸ್ವರ್ಣಾನುಭೂತಿ’ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರಿನ ಮುರಳೀಧರ ಶೆಣೈ ಮತ್ತು ತಂಡ ನಡೆಸಿಕೊಡಲಿದ್ದಾರೆ. ಪಂ. ದೇಬಶಿಶ್ ಭಟ್ಟಾಚಾರ್ಯ (ಕೋಲ್ಕತ್ತಾ) ಸ್ಲೈಡ್ ಗಿಟಾರ್ ಮತ್ತು ಪಂ. ರವೀಂದ್ರ ಯಾವಗಲ್ (ಬೆಂಗಳೂರು) ತಬಲಾದಲ್ಲಿ ಸಾಥ್ ನೀಡಲಿದ್ದಾರೆ.

2027 ಫೆಬ್ರವರಿಯಲ್ಲಿ ಮಂಗಳೂರು ಪುರಭವನದಲ್ಲಿ 5.30 ಕ್ಕೆ ‘ವಸಂತೋತ್ಸವ’ ಕಾರ್ಯಕ್ರಮ ನಡೆಯಲಿದೆ. ಗಾಯನದಲ್ಲಿ ಪ್ರಸಿದ್ಧ ಕಲಾವಿದರಾದ ಧನಂಜಯ ಹೆಗಡೆ (ಬೆಂಗಳೂರು), ಸೋಲೋ ತಬ್ಲದಲ್ಲಿ ಪಂ. ಅನೀಶ್ ಪ್ರಧಾನ (ಮುಂಬೈ), ರಾಮಕಾಂತ್ ಗಾಯಕ್ವಾಡ್ (ಮುಂಬೈ) ತುಮ್ರಿ ಗಾಯನವನ್ನು ನಡೆಸಿಕೊಡಲಿದ್ದಾರೆ. ತಬ್ಲಾದಲ್ಲಿ ಗುರುಮೂರ್ತಿ ವೈದ್ಯ (ಬೆಂಗಳೂರು) ಸಾಥ್ ನೀಡಲಿದ್ದಾರೆ.

ಮಾ.14 ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30 ಕ್ಕೆ ‘ಸಾಂಗ್ಸ್ ಆಫ್ ಸಂನ್ಯಾಸಿ’ ವಿನೂತನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಸ್ವಾಮಿ ವಿವೇಕಾನಂದರ ಜೀವನ ಹಾಗೂ ತತ್ವದರ್ಶನವನ್ನು ಆಧರಿಸಿದ ನೃತ್ಯ, ನಾಟಕ ಮತ್ತು ಸಂಗೀತದ ವೈಶಿಷ್ಟ್ಯಪೂರ್ಣ ಪ್ರಸ್ತುತಿ. ದೇಶದ ವಿವಿಧ ಭಾಗಗಳಿಂದ ಆಗಮಿಸುವ 25 ಮಂದಿ ಪ್ರತಿಭಾವಂತ ಕಲಾವಿದರು ಭಾಗವಹಿಸಲಿದ್ದು, ಕಾರ್ಯಕ್ರಮದ ನಿರ್ದೇಶನವನ್ನು ಪ್ರವೀಣ್ ಡಿ. ರಾವ್ (ಬೆಂಗಳೂರು) ವಹಿಸಲಿದ್ದಾರೆ.ಆ.2 ರಂದು ಮಂಗಳೂರಲ್ಲಿ ‘ಬೋಲವಾ ವಿಠ್ಠಲ’: ಮಂಗಳೂರು ಪುರಭವನದಲ್ಲಿ ಆ.2 ರಂದು ಸಂಜೆ 5.30 ರಿಂದ ‘ಬೋಲವಾ ವಿಠ್ಠಲ’ಎಂಬ ವಿನೂತನ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಮುಂಬೈನ ರಾಜ್ಯೋಗ ಧುರಿ, ಪುಣೆಯ ಆರ್ಯಾ ಅಂಬೇಕರ್, ಪುಣೆಯ ಪಂ. ಆನಂದ ಭಾಟೆ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಪುಣೆ ಮತ್ತು ಮುಂಬೈನ ಖ್ಯಾತ ಸಹವಾದ್ಯ ಕಲಾವಿದರು ಸಾಥ್ ನೀಡಲಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳು ದೇಶದ ಹೆಸರಾಂತ ಕಲಾವಿದರು ಹಾಗೂ ಪ್ರತಿಭಾವಂತ ಯುವ ಕಲಾವಿದರ ಅಪೂರ್ವ ಸಂಗಮವಾಗಿದೆ. ಸಂಗೀತವನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸುವ ಅಪರೂಪದ ಅವಕಾಶ ಸಂಗೀತಾಸಕ್ತರಿಗೆ ದೊರೆಯಲಿದೆ.

-ಪ್ರೊ.ನರೇಂದ್ರ ಎಲ್‌. ನಾಯಕ್‌, ಉಪಾಧ್ಯಕ್ಷರು, ಸಂಗೀತ ಭಾರತಿ ಫೌಂಡೇಶನ್ ಮಂಗಳೂರು