ಮಂಗಳೂರಿನ ಪ್ರಸಿದ್ಧ ಸಂಗೀತ ಆಯೋಜಕರಾದ ಸಂಗೀತ ಭಾರತಿ ಫೌಂಡೇಷನ್ ಸಂಸ್ಥೆ ಉಡುಪಿ ಮೂಲದ ದಿ ಓರಿಜಿನಲ್ ಆಭರಣ ಜ್ಯುವೆಲರ್ಸ್ ಸಹಯೋಗದಲ್ಲಿ ‘ಅನುಬಂಧ - ಎ ಸೇಕ್ರೆಡ್ ಬಾಂಡ್’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಆ. ೨೩ರಂದು ಸಂಜೆ ೫ ಗಂಟೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದೆ.
ಮಂಗಳೂರು: ಮಂಗಳೂರಿನ ಪ್ರಸಿದ್ಧ ಸಂಗೀತ ಆಯೋಜಕರಾದ ಸಂಗೀತ ಭಾರತಿ ಫೌಂಡೇಷನ್ ಸಂಸ್ಥೆ ಉಡುಪಿ ಮೂಲದ ದಿ ಓರಿಜಿನಲ್ ಆಭರಣ ಜ್ಯುವೆಲರ್ಸ್ ಸಹಯೋಗದಲ್ಲಿ ‘ಅನುಬಂಧ - ಎ ಸೇಕ್ರೆಡ್ ಬಾಂಡ್’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಆ. ೨೩ರಂದು ಸಂಜೆ ೫ ಗಂಟೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದೆ.
ಗುರು-ಶಿಷ್ಯ ಪರಂಪರೆಯ ಅನನ್ಯ ಸಂಗೀತ ಬಾಂಧವ್ಯವನ್ನು ಸ್ವರ-ಲಯಗಳ ಮೂಲಕ ಅನಾವರಣಗೊಳಿಸುವುದು ಈ ಉತ್ಸವದ ವಿಶೇಷತೆ. ಧಾರವಾಡ ಘರಾಣೆಯ ಆರನೇ ತಲೆಮಾರಿನ ಕಲಾವಿದ, ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಹಾಗೂ ಅವರ ಶಿಷ್ಯ ಮಂಗಳೂರಿನ ಯುವ ಸಿತಾರ್ ಪ್ರತಿಭೆ ಅಂಕುಶ್ ಎನ್. ನಾಯಕ್ ಜುಗಲ್ಬಂದಿ ಪ್ರಸ್ತುತಪಡಿಸಲಿದ್ದಾರೆ.ಗುರು-ಶಿಷ್ಯರ ಸಿತಾರ್ ತಂತಿಗಳಲ್ಲಿ ಅರಳುವ ಮೀಂಡ್, ಗಮಕ ಹಾಗೂ ತಾನ್ಗಳಿಗೆ ವಿಶ್ವಪ್ರಸಿದ್ಧ ತಬಲಾ ವಾದಕ ಮುಂಬೈಯ ಪಂಡಿತ್ ಯೋಗೇಶ್ ಸಂಶಿ ಮತ್ತು ಅವರ ಶಿಷ್ಯ ಯಶವಂತ ವೈಭವ್ ಲಯದ ಸೊಬಗು ತುಂಬಲಿದ್ದಾರೆ. ಸಿತಾರ್ ಮತ್ತು ತಬಲಾದ ನಡುವಿನ ಸೂಕ್ಷ್ಮ ಸಂವಾದ ಶ್ರೋತೃಗಳನ್ನು ನಾದದ ಆಂತರಿಕ ಲೋಕಕ್ಕೆ ಕರೆದೊಯ್ಯಲಿದೆ.ಸಂಗೀತೋತ್ಸವದ ಪೂರ್ವಾರ್ಧದಲ್ಲಿ ಕಶ್ಯಪ್ ಬಂಧು ಖ್ಯಾತಿ ಪಡೆದ ಸಹೋದರರಾದ ಹೊಸದಿಲ್ಲಿಯ ಪಂ. ಪ್ರಭಾಕರ್ ಕಶ್ಯಪ್ ಹಾಗೂ ಪಂ. ದಿವಾಕರ್ ಕಶ್ಯಪ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ಖಯಾಲ್ ಪರಂಪರೆಯ ಆಲಾಪನೆಯ ಗಾಂಭೀರ್ಯ, ಸ್ವರಪ್ರಸ್ತಾರದ ಸೌಂದರ್ಯ ಹಾಗೂ ತಾನ್ಗಳ ಚೈತನ್ಯ ಅವರ ಗಾಯನದಲ್ಲಿ ಮೇಳೈಸಲಿದೆ. ಹಾರ್ಮೋನಿಯಂನಲ್ಲಿ ಖ್ಯಾತ ಕಲಾವಿದ ಪಂ. ರವೀಂದ್ರ ಕಟೋಟಿ ಹಾಗೂ ತಬಲಾದಲ್ಲಿ ಯಶವಂತ ವೈಭವ್ ಸಹವಾದನ ನೀಡಲಿದ್ದಾರೆ.
‘ಅನುಬಂಧ’ ಎಂಬ ಶೀರ್ಷಿಕೆಯೇ ಸಂಗೀತೋತ್ಸವದ ಆಶಯವನ್ನು ಸಾರುತ್ತದೆ. ಕಾರ್ಯಕ್ರಮಕ್ಕೆ ಬುಕ್ ಮೈ ಶೋ ಆ್ಯಪ್ ಮೂಲಕ ಸೀಟು ಕಾಯ್ದಿರಿಸಿಕೊಳ್ಳಬಹುದಾಗಿದೆ.