ಸಾರಾಂಶ
ವೇದಗಳಲ್ಲಿನ ಸಾಮವೇದದಿಂದ ಬಂದ ಕಲೆ ಸಂಗೀತ ಎಂದು ಹಿರಿಯ ವಕೀಲ ಎಚ್.ಸುಬ್ರಹ್ಮಣ್ಯ ಜೋಯಿಸ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೇದಗಳಲ್ಲಿನ ಸಾಮವೇದದಿಂದ ಬಂದ ಕಲೆ ಸಂಗೀತ ಎಂದು ಹಿರಿಯ ವಕೀಲ ಎಚ್.ಸುಬ್ರಹ್ಮಣ್ಯ ಜೋಯಿಸ್ ಅಭಿಪ್ರಾಯಪಟ್ಟರು.ಪಂ.ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಆಯೋಜಿಸಿದ್ದ ‘ಸಂಗೀತ ಶ್ರಾವಣ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಗೀತಕ್ಕೆ ಅಪಾರ ಶಕ್ತಿಯಿದೆ. ನೋವನ್ನು ಮರೆಸುವ ಗುಣವಿದೆ. ವೇದಗಳಲ್ಲಿನ ಸಾಮವೇದದಿಂದ ಬಂದ ಕಲೆ ಸಂಗೀತವಾಗಿದೆ. ಸಂಗೀತಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಟಿ ಯಮುನಾ ಶ್ರೀನಿಧಿ ಮಾತನಾಡಿ, ನಾಡಿನ ಸಂಸ್ಕೃತಿ ಹಾಗೂ ಸಂಗೀತ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ಪಂ.ಬಸವರಾಜ್ ಬೆಂಡಿಗೇರಿ ಶಿಷ್ಯರಾದ ಪಂ.ಸತೀಶ್ ಹಂಪಿಹೊಳಿ ಅವರು ಸಂಗೀತ ಕಲೆಯನ್ನು ವಿಶ್ವಾದ್ಯಂತ ಪ್ರಚುರಪಡಿಸಿ ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ತಿಕ್ ಫೌಂಡೇಷನ್ ಅಧ್ಯಕ್ಷೆ ರೇಖಾ ಕೆ.ಗೋವಿಂದ್, ಚೈತನ್ಯ ಸಮಗ್ರ ಸೇವಾ ಸಂಸ್ಥೆ ಮುಖ್ಯಸ್ಥೆ ಚಿತ್ರ ನಾಗಶಯನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಬಲ ವಾದಕ ಪಂ.ಸಂತೋಷ್ ಕುಲಕರ್ಣಿ ಅವರಿಗೆ ಸದ್ಗುರು ಶ್ರೀ ಪ್ರಶಸ್ತಿ ನಿಡಿ ಗೌರವಿಸಲಾಯಿತು. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿತ್ತು.ಪಂ.ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಆಯೋಜಿಸಿದ್ದ ‘ಸಂಗೀತ ಶ್ರಾವಣ’ ಕಾರ್ಯಕ್ರಮದಲ್ಲಿ ತಬಲ ವಾದಕ ಪಂ.ಸಂತೋಷ್ ಕುಲಕರ್ಣಿ ಅವರಿಗೆ ಸದ್ಗುರು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ವಕೀಲ ಎಚ್.ಸುಬ್ರಹ್ಮಣ್ಯ ಜೋಯಿಸ್, ನಟಿ ಯಮುನಾ ಶ್ರೀನಿಧಿ ಹಾಜರಿದ್ದರು.