ಇಸ್ಲಾಂ ಧರ್ಮದಲ್ಲಿ ಮಳೆಯ ಕೊರತೆ ಉಂಟಾದಾಗ ಅಲ್ಲಾಹನಲ್ಲಿ ಮಳೆಗಾಗಿ ವಿಶೇಷವಾಗಿ ನಮಾಜ್-ಏ-ಇಸ್ತಿಸ್ಕಾ ಸಲ್ಲಿಸುವ ಸಂಪ್ರದಾಯವು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ

ಕುಷ್ಟಗಿ: ಮಳೆ ಕೊರತೆಯಿಂದ ರೈತರು, ಜನರು ಹಾಗೂ ಜಾನುವಾರುಗಳು ಎದುರಿಸುತ್ತಿರುವ ಸಂಕಷ್ಟ ನಿವಾರಣೆಯಾಗಲಿ ಮತ್ತು ಉತ್ತಮ ಮಳೆ ಸುರಿಯಲಿ ಎಂದು ಪಟ್ಟಣದ ಅಂಜುಮನ್-ಎ-ಇಸ್ಲಾಂ ಪಂಚ್ ಕಮಿಟಿ, ಖಬ್ರಸ್ಥಾನ ಕಮಿಟಿ, ನೌಜವಾನ್ ಕಮಿಟಿ ಹಾಗೂ ಮುಸ್ಲಿಂ ಸಮುದಾಯದಿಂದ ಶನಿವಾರ ವಿಶೇಷ ಕಾಲ್ನಡಿಗೆ ಮತ್ತು ನಮಾಜ್-ಏ-ಇಸ್ತಿಸ್ಕಾ (ಮಳೆಗಾಗಿ ವಿಶೇಷ ಪ್ರಾರ್ಥನೆ) ಕಾರ್ಯಕ್ರಮ ನಡೆಯಿತು.

ಪಟ್ಟಣದ ಜಾಮಿಯಾ ಮಸೀದಿಯಿಂದ ಈದ್ಗಾ ಮೈದಾನದವರೆಗೆ ಸಮುದಾಯದ ಸದಸ್ಯರು ಬರಿಗಾಲಿನಲ್ಲಿ ಭಕ್ತಿಭಾವದಿಂದ ಪಾದಯಾತ್ರೆ ನಡೆಸಿದರು. ನಂತರ ಈದ್ಗಾ ಮೈದಾನದಲ್ಲಿ ಮಳೆಗಾಗಿ ವಿಶೇಷ ನಮಾಜ್ ಹಾಗೂ ದುವಾ ಸಲ್ಲಿಸಲಾಯಿತು. ಧಾರ್ಮಿಕ ಗುರು ಫಜಲೇ ಅಜೀಮ್ ಅವರು ನಮಾಜ್-ಏ-ಇಸ್ತಿಸ್ಕಾವನ್ನು ನೆರವೇರಿಸಿ ಉತ್ತಮ ಮಳೆಯಾಗುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ರೀಜ್ವಾನ್ ಹಾಗೂ ಮೌಲಾನಾ ಅಹಮ್ಮದ್ ಹುಸೇನ್, ಇಸ್ಲಾಂ ಧರ್ಮದಲ್ಲಿ ಮಳೆಯ ಕೊರತೆ ಉಂಟಾದಾಗ ಅಲ್ಲಾಹನಲ್ಲಿ ಮಳೆಗಾಗಿ ವಿಶೇಷವಾಗಿ ನಮಾಜ್-ಏ-ಇಸ್ತಿಸ್ಕಾ ಸಲ್ಲಿಸುವ ಸಂಪ್ರದಾಯವು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದ ಅವರು, ಈ ವಿಶೇಷ ಪ್ರಾರ್ಥನೆ ಮೂರು ದಿನಗಳ ಕಾಲ ನಿರಂತರವಾಗಿ ನಡೆಸುವ ಪದ್ಧತಿಯಿದ್ದು ಅದರಂತೆ ಶನಿವಾರ ಆರಂಭಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿಯೂ ಪ್ರಾರ್ಥನೆ ಮುಂದುವರಿಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಂಜುಮನ್ ಪಂಚ್ ಕಮಿಟಿಯ ಅಧ್ಯಕ್ಷ ಅಹಮ್ಮದ್ ಹುಸೇನ್ ಆದೋನಿ, ಉಪಾಧ್ಯಕ್ಷ ಮೈನುದ್ದೀನ್ ಮುಲ್ಲಾ, ಖಾಜಾಸಾಬ ಅತ್ತಾರ್, ಬಾಬು ಡಾಕ್ಟರ್, ಮೂರ್ತಜಾ ಎಂ.ಕಾಂ, ಖಾಜಾಸಾಬ ನಾಡಗೌಡ, ಲಾಡ್ಲೆ ಮಾಶಾಕ್ ದೋಟಿಹಾಳ, ನಿಜಾಮ್ ವಠಾರ್, ಶ್ಯಾಮಿದಸಾಬ್‌ ಗಾಂದೆಣ್ಣಿ, ಅಯೂಬ್ ಮುಲ್ಲಾ, ಕಿಸ್ತಿ ಕಪಾಲಿ, ಸುಲೇಮಾನ್ ಚಡಚಣ, ನಜೀರ್ ಸಾಬ್ ಮೂಲಿಮನಿ, ಮಾಹಿಬೂಬ್ ನೆರೆಬೆಂಚಿ, ಮಾಹಿಬೂಬ್ ಕಮ್ಮಾರ್, ಅಮೀನುದ್ದೀನ್ ಮುಲ್ಲಾ, ಆರ್.ಟಿ. ಸುಬಾನಿ, ಹುಸೇನ್ ಕಾಯಿಗೆಡ್ಡಿ, ಜಾವೇದ್ ವಾಠಾರ್, ನದೀಮ್, ಆಲಂಸಾಬ್ ಚಾವೂಸ್, ಮುರ್ತಜಾಸಾಬ ಕಲಾಲಬಂಡಿ, ಜಿಲಾನ್ ಮುಲ್ಲಾ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.