ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಆಶ್ರಯದಲ್ಲಿ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಕುಶಾಲನಗರದ ಗುಂಡುರಾವ್ ಬಡಾವಣೆ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಆಶ್ರಯದಲ್ಲಿ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಕುಶಾಲನಗರದ ಗುಂಡುರಾವ್ ಬಡಾವಣೆ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಶೀದ್ ಕೆ.ಎ. ಕ್ರೀಡಾ ಧ್ವಜಾರೋಹಣ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಕ್ರೀಡಾಕೂಟ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು. ಮುಸ್ಲಿಂ ಕಪ್ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದ ಮುಖಂಡರು ಭಾಗಿಯಾಗಿ ಕ್ರೀಡಾಕೂಟಕ್ಕೆ ಶುಭ ಕೋರುವ ಸಂಸ್ಕೃತಿ ಮುಂದುವರೆಸಿಕೊಂಡು ಬಂದಿದ್ದೇವೆ ಎಂದರು.ಮುಖ್ಯ ಅತಿಥಿಯಾಗಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಎರಡು ದಶಕಗಳ ಇತಿಹಾಸ ಹೊಂದಿರುವ ಮುಸ್ಲಿಂ ಕಪ್ ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿ ಕ್ರೀಡಾಕೂಟಗಳಿಗೆ ಹೆಸರುವಾಸಿಯಾಗಿದೆ. ಸೌಹಾರ್ದ ಭಾರತ ನಿರ್ಮಾಣ, ಪರಸ್ಪರ ಭ್ರಾತೃತ್ವದ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕ್ರೀಡಾಕೂಟದ ಆಶಯಗಳು ಈಡೇರಲಿ ಎಂದು ಶುಭ ಹಾರೈಸಿದರು.ಮತ್ತೊಬ್ಬ ಅತಿಥಿ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ಗುಂಡುರಾವ್ ಬಡಾವಣೆ ಮೈದಾನವನ್ನು ಒಳಾಂಗಣ ಹಾಗೂ ಹೊರಾಂಗಣ ಸ್ಟೇಡಿಯಂ ಮತ್ತು ತರಬೇತಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ದೂರದೃಷ್ಟಿ ಹೊಂದಿದ್ದು, ಸಚಿವ ದಿನೇಶ್ ಗುಂಡುರಾವ್ ಅವರ ಮೂಲಕ ಕೇಂದ್ರ ಸರ್ಕಾರದ ಸಹಕಾರ ಪಡೆಯುವ ಚಿಂತನೆ ನಡೆಸಿದ್ದಾರೆ ಎಂದರು.ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಗೌರವಾಧ್ಯಕ್ಷ ಇಸ್ಮಾಯಿಲ್, ಕುಶಾಲನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಎಂ.ಜೆ. ಇರ್ಫಾನ್, ಸುಂಟಿಕೊಪ್ಪದ ನಿಯಾಜ್ ಮಾತನಾಡಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕುಶಾಲನಗರ ಜಾಮಿಯಾ ಮಸೀದಿ ಅಧ್ಯಕ್ಷ ಮೆಹತಾಬ್ ಅಹಮ್ಮದ್, ದಾನಿ ಅಂಜದ್, ಗರಗಂದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಮುಸ್ತಾಫ, ಪ್ರಮುಖರಾದ ಫೈಸಲ್ ಇ ಪಾಯದತ್ ಉಪಸ್ಥಿತರಿದ್ದರು.ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ರಜಾಕ್ ಕೆ.ಎ., ಪ್ರಧಾನ ಕಾರ್ಯದರ್ಶಿ ಎಸ್. ಆದಂ, ಖಜಾಂಚಿ ಕೆ.ಎಂ. ಮುಜೀಬ್, ಕಾನೂನು ಸಲಹೆಗಾರ ಸುಫಿಯಾನ ಎಂ.ಎಂ., ನಿರ್ದೇಶಕರಾದ ಹ್ಯಾರಿಸ್ ಎನ್.ಪಿ., ರಜಾಕ್ ಎಂ.ಕೆ., ಅಶ್ರಫ್ ಪಿ.ಎ., ಬಾಷಾ ಎಂ.ಎಸ್., ಆರೀಸ್ ಎಂ.ಎಂ., ಅನೀಸ್, ಆತಿಫ್ ಮುನ್ನ ಮತ್ತಿತರರು ಇದ್ದರು. 7 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 50ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ.