ಚಿಕ್ಕಮಗಳೂರುಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೀದಿ ಕಾಳಗದ ವೇಳೆ ಮುಸ್ಲಿಂ ಸಮುದಾಯವನ್ನು ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಗೂಂಡಾಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನ ಮುಸ್ಲಿಂ ಮುಖಂಡರು ನಗರ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೀದಿ ಕಾಳಗದ ವೇಳೆ ಮುಸ್ಲಿಂ ಸಮುದಾಯವನ್ನು ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಗೂಂಡಾಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನ ಮುಸ್ಲಿಂ ಮುಖಂಡರು ನಗರ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.ಕಳೆದ ಗುರುವಾರ ಚಿಕ್ಕಮಗಳೂರಿನ ಹೊರವಲಯದ ರಾಂಪುರದ ರಸ್ತೆ ಕಾಮಗಾರಿ ಪರಿಶೀಲನೆಗೆ ಸಿ.ಟಿ.ರವಿ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಕೈ ಕೈ ಮಿಲಾಯಿಸಿದ್ದರು.
ಈ ವೇಳೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮುಸ್ಲಿಂ ಸಮುದಾಯವನ್ನು ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದಾರೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ತುಂಬಿದ ಮಾತುಗಳನ್ನಾಡಿದ್ದಾರೆ. ಜನರ ನಡುವೆ ಆತಂಕ, ಭಯ ಮತ್ತು ಗಲಭೆ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಸಂತೋಷ್ ಕೋಟ್ಯಾನ್ ಬಳಸಿದ ಶಬ್ದ ಆಕಸ್ಮಿಕ ಅಥವಾ ಭಾವಾವೇಶದ ಕ್ಷಣಿಕ ಕೋಪವಾಗಿರಲಿಲ್ಲ. ಅದು ಉದ್ದೇಶ ಪೂರ್ವಕ ಮತ್ತು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿ ಸಾರ್ವಜನಿಕ ಸ್ಥಳದಲ್ಲಿ ದ್ವೇಷ ಹುಟ್ಟಿಸುವ ಕೋಮು ಗಲಭೆ ಪ್ರಚೋದಿಸುವ ಲೆಕ್ಕಾಚಾರವಾಗಿತ್ತು ಎಂದು ದೂರುದಾರ ಮುಸ್ಲಿಂ ಮುಖಂಡ ಮುದಸ್ಸಿರ್ ಪಾಷಾ ಆರೋಪಿಸಿದ್ದಾರೆ.ಸಂತೋಷ್ ಕೋಟ್ಯಾನ್ ಈ ರೀತಿ ಮಾಡುತ್ತಿರುವುದು ಇದೇನು ಮೊದಲಲ್ಲ, ಈ ಹಿಂದೆ ಸಾಕಷ್ಟು ದ್ವೇಷ ಹುಟ್ಟಿಸುವ, ಶಾಂತಿ ಕದಡುವ ಭಾಷಣ ಮತ್ತು ಕೃತ್ಯಗಳನ್ನು ಮಾಡಿದ್ದಾರೆ. ಹೀಗಾಗಿ, ತಕ್ಷಣ ಸಂತೋಷ್ ಕೋಟ್ಯಾನ್ ವಿರುದ್ಧ ಎಫ್ಐಆರ್ ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೂರಿನೊಂದಿಗೆ ಸಂತೋಷ್ ಕೋಟ್ಯಾನ್ ಮುಸ್ಲಿಂ ಸಮುದಾಯದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಸಾಕ್ಷಿಯನ್ನು ಸಲ್ಲಿಕೆ ಮಾಡಲಾಗಿದೆ.ಫೋಟೋ
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಬಂಧನಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಗೆ ಮುಸ್ಲಿಂ ಮುಖಂಡರು ಶುಕ್ರವಾರ ದೂರು ಸಲ್ಲಿಸಿದರು.(ಸಂತೋಷ್ ಕೋಟ್ಯಾನ್ ಮುಖ ಚಿತ್ರ ಬಳಸಿ)