ಸಾರಾಂಶ
ಬಂಧಿಸಿ ಸಾಮಾನ್ಯ ಕೈದಿಯಂತೆ ನಡೆಸಿಕೊಂಡಿದೆ । ಅವಿರತ ಹೋರಾಟದಿಂದ ಸುಗ್ರೀವಾಜ್ಞೆಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡದ ದನಿಯನ್ನ ಅಡಗಿಸುವ ಹುನ್ನಾರ ನಡೆಸಿದೆ. ಅದಕ್ಕಾಗಿ ತಮ್ಮ ಬಂಧನ ಮಾಡಿದರು. ತಮ್ಮ ಸಂಘಟನೆ ಕಾರ್ಯಕರ್ತರು ಅವಿರತ ಹೋರಾಟಗಳ ಮೂಲಕ ತಕ್ಕ ಉತ್ತರವನ್ನು ನೀಡಿ ಗೆಲುವು ಸಾಧಿಸಿದರು. ಅದರಿಂದಲೇ ರಾಜ್ಯ ಸರ್ಕಾರ ಸುಗ್ರಿವಾಜ್ಞೆಯನ್ನು ಜಾರಿಗೆ ತಂದಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.ತಾಲೂಕಿನ ಮಾಲೇಕಲ್ ತಿರುಪತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರು ಮಹಾನಗರ ಉತ್ತರ ಭಾರತದ ಬಂಡವಾಳಶಾಹಿ ಉದ್ಯಮಿಗಳ ನೆಲೆ ಬೀಡಾಗುತ್ತಿದೆ. ಕನ್ನಡ ನಾಡಿನಲ್ಲಿಯೇ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದು, ಕನ್ನಡ ಪರ ಸಂಘಟನೆಗಳ ದನಿಗಳನ್ನು ಅಡಗಿಸಲು ಅನೇಕ ದುಷ್ಟಶಕ್ತಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಪರಿಣಾಮ ಡಿ.೨೭ ರಂದು ನಮ್ಮ ಕರವೇ ಸಂಘಟನೆ ಕನ್ನಡ ನಾಮಫಲಕಗಳ ಅಳವಡಿಕೆಗೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸರ್ಕಾರ ನಮ್ಮನ್ನೂ ಮತ್ತು ನಮ್ಮ ಕಾರ್ಯಕರ್ತರನ್ನು ಬಂಧಿಸಿ ೧೬ ಪ್ರಕರಣಗಳನ್ನು ದಾಖಲಿಸಿ ಸಾಮಾನ್ಯ ಖೈದಿಯಂತೆ ನಡೆಸಿಕೊಂಡು ಕನ್ನಡದ ಮನಸ್ಸುಗಳಿಗೆ ಮಹಾ ದ್ರೋಹ ಎಸಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ ೩೦ ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅವಿರತ ಹೋರಾಟ ಮಾಡಿಕೊಂಡು ಬಂದಿದ್ದ ಸಂಘಟನೆ ಕಾರ್ಯಕರ್ತರಿಗೆ ಯಾವುದೇ ಸರ್ಕಾರ ಈ ರೀತಿ ನಡೆಸಿಕೊಂಡಿರಲ್ಲಿಲ್ಲ, ಆದರೆ ಸಿದ್ದರಾಮಯ್ಯ ಸರ್ಕಾರ ಕೆಲವು ದುಷ್ಟಶಕ್ತಿಗಳಿಗೆ ಮಣೆಹಾಕುವ ಹುನ್ನಾರದಲ್ಲಿ ಕನ್ನಡಿಗರ ತಾಳ್ಮೆಯನ್ನು ಪರೀಕ್ಷೀಸಲು ಮುಂದಾಗಿದೆ, ಆದರೆ ರಾಜ್ಯದ ಅನೇಕ ಕಡೆಗಳಲ್ಲಿ ಹೋರಾಟ ಮೂಲಕ ಸಂಘಟನೆ ಕಾರ್ಯಕರ್ತರು ಕೊಟ್ಟ ಉತ್ತರದಿಂದ ಎಚ್ಚೇತ್ತುಕೊಂಡ ಸರ್ಕಾರ ಸುಗ್ರಿವಾಜ್ಞೆ ಜಾರಿಗೆ ತಂದು ಫೆ.೨೮ ರ ಗಡುವು ನೀಡಿದೆ, ಅಲ್ಲಿಯವರೆಗೂ ಕಾಯುತ್ತೇವೆ, ಸರ್ಕಾರ ಸುಗ್ರಿವಾಜ್ಞೆಯನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ವಿಫಲವಾದರೆ ಕರವೇ ಸಂಘಟನೆಯು ಮತ್ತೇ ಹೋರಾಟ ನಡೆಸುಸುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ವ್ಯಾಪಾರಿ ಕೇಂದ್ರಗಳು, ಕಂಪನಿಗಳು ಹಾಗೂ ಇನ್ನಾವುದೇ ಸಂಸ್ಥೆಗಳು ಅಳವಡಿಸುವ ಬೋರ್ಡ್ಗಳಲ್ಲಿ ಶೇ ೬೦ ರಷ್ಟು ಕನ್ನಡ ಭಾಷೆಯ ಬಳಕೆ ಮಾಡುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಹಲವು ಕಡೆಗಳಲ್ಲಿ ಕನ್ನಡ ಬಳಸದ ನಾಮಫಲಕಗಳ ತೆರವು ಕಾರ್ಯ ನಡೆದಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ನಾಮಫಲಕಗಳು ಕನ್ನಡದಲ್ಲೇ ರಾರಾಜಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳದಿದ್ದರೆ ಫೆಬ್ರವರಿ ೨೮ ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳು, ತಾಲೂಕುಗಳು ಸೇರಿ ದೊಡ್ಡಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು‘ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ನಮ್ಮನ್ನು ಹಾಗೂ ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಿ ನಮ್ಮನ್ನು ಅನಾಗರಿಕರಂತೆ ನಡೆಸಿಕೊಂಡಿದೆ. ನಮ್ಮ ಹೋರಾಟದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರ ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆದರೆ ನಾನು ಹೊಯ್ಸಳ ನಾಡಿನ ಮಣ್ಣಿನಿಂದ ಬಂದವನು. ನನಗೆ ಈ ಮಣ್ಣಿನ ತಾಕತ್ತು ಅದರ ಶಕ್ತಿ ನನಗಿದೆ’ ಎಂದು ಹೇಳಿದರು.
ಕರವೇ ಜಿಲ್ಲಾ ಅಧ್ಯಕ್ಷ ಮನುಕುಮಾರ್, ಉಪಾಧಕ್ಷ ತುಲಸೀದಾಸ್, ತಾಲೂಕು ಅಧಕ್ಷ ಹೇಮಂತ್ ಕುಮಾರ್, ಗೌರವ ಅಧಕ್ಷ ಬಾಣಾವರ ಲಕ್ಷ್ಮೀಶ್, ನಗರ ಅಧಕ್ಷ ಕಿರಣ್ ಕುಮಾರ್, ಮಹಿಳಾ ಘಟಕದ ತಾಲೂಕು ಅಧಕ್ಷೆ ಕಮಲಮ್ಮ, ನಗರಸಭ ಸದಸ್ಯ ಮನೋಹರ್ ಸದಸ್ಯ ಇದ್ದರು.ತಾಲೂಕಿನ ಮಾಲೇಕಲ್ ತಿರುಪತಿಯಲ್ಲಿ ಸುದ್ದಿಗಾರರೊಂದಿಗೆ ಕರವೇ ರಾಜ್ಯಾಧಕ್ಷರಾದ ಟಿ.ಎ.ನಾರಾಯಣಗೌಡ ಮಾತನಾಡಿದರು.