ಹರಪನಹಳ್ಳಿ: ನಾಡಿನಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಲಿ.ಡಾ.ಚಂದ್ರಮೌಳೀಶ್ವರ ಶಿವಾಚಾರ್ಯ ಪುಣ್ಯ ಪ್ರಭಾವದಿಂದ ನನ್ನ ಹುಟ್ಟಿಗೆ ಬೆಲೆ ಬಂದಿದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಶ್ರೀ ಹೇಳಿದರು.ನಗರದ ತೆಗ್ಗಿನಮಠದ ಸಭಾ ಭವನದಲ್ಲಿ ಶುಕ್ರವಾರ ತಮ್ಮ 33ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬದಲಾವಣೆಯಿಂದ ನಮ್ಮನ್ನ ಗುರುತಿಸಿಕೊಳ್ಳಬಾರದು. ಬದಲಾಗದೇ ಇರುವ ಬದುಕು ನಮ್ಮದಾಗಬೇಕು. ಅದು ಯಾವುದೆಂದರೆ ಆಧ್ಯಾತ್ಮ ಮಾತ್ರ. ಭೂಮಿ ಮೇಲೆ ಹುಟ್ಟಿ ಬಂದವರಿಗೆಲ್ಲ ಸಾವಿದೆ. ಆದರೆ ಕೆಲವರು ಮಾತ್ರ ಈ ಭೂಮಿಯ ಮೇಲೆ ಅಜರಾಮರರಾಗಿ ಹೋಗಿದ್ದಾರೆ. ಸಾಯದೇ ಬದುಕುವ ಕಲೆ ಕರಗತ ಮಾಡಿಕೊಂಡಿದ್ದಾರೆ ಎಂದು ನುಡಿದರು.ಲಿ.ಡಾ.ಚಂದ್ರಮೌಳೀಶ್ವರ ಶಿವಾಚಾರ್ಯರು ಕೇವಲ ಮಠಾಧೀಶರರಾಗಿರಲಿಲ್ಲ. ಅವರೊಬ್ಬ ಶಿಕ್ಷಣ ಸಂತ, ಸಮಾಜದ ನಾಡಿ ತಿಳಿಸಿದ ಮಹಾನ್ ಋಷಿ. ಜನನ, ಮೃತ್ಯು, ಜರಾ, ವ್ಯಾದಿ, ದುಃಖ, ದೋಷಾನು ದರ್ಶನಂ ಎಂಬ ಈ ಮಾತಿನಂತೆ ವಿಧಿ ವಿಧಾನಗಳಿಂದಲ್ಲ. ಅದು ಜೀವನ ಶುದ್ಧೀಕರಣದಿಂದ ಮಕ್ಕಳು ಅಜ್ಞಾನದಲ್ಲಿ ಇದ್ದರೆ, ನಾವು ಮಾಡುವ ಪೂಜೆಗಳಿಗೆ ಅರ್ಥವೇನು ಎಂಬ ಸಂಕಲ್ಪ ಮಾಡಿ ಟಿಎಂಎಇ ಸಂಸ್ಥೆಯನ್ನು ಆರಂಭಿಸಿದರು ಎಂದರು.
ಗ್ರಾಮಗಳ ಮಣ್ಣಿನ ಮನೆಗಳಲ್ಲಿ ಕತ್ತಲೆಯೊಳಗೆ ಮುಳುಗುತ್ತಿದ್ದ ಭವಿಷ್ಯವನ್ನು ಕಂಡ ಪೂಜ್ಯರು ಜ್ಞಾನದ ದೀಪ ಹಚ್ಚಿದರು. ಅದಕ್ಕಾಗಿ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ, ಮಠ ಕಟ್ಟಲು ಭಕ್ತರಲ್ಲಿ ಹಣ ಬೇಡಲಿಲ್ಲ, ಬದಲಾಗಿ ಶಾಲೆ ಕಟ್ಟಲು ಹಣ ಬೇಡಿದರು. ಆಹಾರ, ನಿದ್ರೆ, ಬಾಯಾರಿಕೆಗಳನ್ನು ಲೆಕ್ಕಿಸದೇ ಅವಕಾಶಗಳನ್ನು ನಿರ್ಮಿಸಿದರು. ಆತ್ಮವಿಶ್ವಾಸದ ಮೂಲಕ ಗ್ರಾಮೀಣ ಪ್ರದೇಶದ ದಿಕ್ಕನ್ನು ಬದಲಿಸಿದರು ಎಂದು ತಿಳಿಸಿದರು.ನಮ್ಮೂರಿನ ಹೆಸರನ್ನು ಭಾರತದ ಭೂಪಟದಲ್ಲಿ ಚಂದ್ರಾರ್ಕವಾಗಿ ಉಳಿಯುವಂತೆ ಮಾಡಿದ ಕೀರ್ತಿ ಚಂದ್ರಮೌಳೀಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ. ಧರ್ಮಕ್ಕಾಗಿ ಬಾಳಿ ಬದುಕಿದ ಗುರು ಯಾರಾದರೂ ಇದ್ದರೆ ಅದು ಚಂದ್ರಮೌಳೀಶ್ವರ ಶಿವಾಚಾರ್ಯರೊಬ್ಬರೆ, ಅಂತಹ ಗುರು ನನಗೆ ದೊರೆತದ್ದು ನನ್ನ ಪುಣ್ಯ, ಅವರ ಪುಣ್ಯ ಪ್ರಭಾವದಿಂದ ನನ್ನ ಹುಟ್ಟಿಗೆ ಬೆಲೆ ಬಂದಿದೆ ಎಂದು ತಿಳಿಸಿದರು.
ಹರಪನಹಳ್ಳಿ ಡಿವೈಎಸ್ಪಿ ಸಂತೋಷ ಚವ್ಹಾಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನಿಹಳ್ಳಿ ಪುರವರ್ಗಮಠದ ಮಳೇಯೋಗೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಪುರಗೇರಿ ಹಿರೇಮಠದ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.ಡಾ.ಮಹೇಶ, ಡಾ.ರಾಖೇಶ, ವರ್ತಕ ಉತ್ತಮ ಚಂದ್ ಜೈನ್, ಟಿ.ಎಂ.ವಿಶ್ವನಾಥ್, ಟಿ.ಎಂ.ಪ್ರತೀಕ್, ರವಿಕುಮಾರ, ವೀರುಪಾಕ್ಷಪ್ಪ, ರಾಜಶೇಕರ್, ಸಿ.ಎಂ.ಕೊಟ್ರಯ್ಯ ಸೇರಿದಂತೆ ಮಠದ ಭಕ್ತರು ಟಿಎಂಎಇ ಸಂಸ್ಥೆ ಸಿಬ್ಬಂದಿ ಇದ್ದರು.